ಉಡುಪಿ, ಜೂ 23 (DaijiworldNews/PY): ಮಲ್ಪೆ ಸಮೀಪದ ಹೂಡೆ ಪಡುತೋನ್ಸೆಯ ಸ್ವರ್ಣ ನದಿಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಮರಳುಗಾರಿಕೆ ನಡೆಯುತ್ತಿದ್ದ ಅಡ್ಡೆಯ ಮೇಲೆ ಗಣಿಗಾರಿಕೆ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ಬೋಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಮಾರ್ಚ್ನಲ್ಲೂ ಪಡುತೋನ್ಸೆಯ ನಿವಾಸಿ ಇರ್ಷಾದ್ ಎಂಬವರು ಉತ್ತರ ಪ್ರದೇಶ ಮೂಲದ ಕಾರ್ಮಿಕರನ್ನು ಬಳಸಿಕೊಂಡು ಮರಳುಗಾರಿಕೆ ನಡೆಸುತ್ತಿದ್ದರು. ಇದು ಗಣಿ ಇಲಾಖೆಯ ಗಮನಕ್ಕೆ ಬಂದು ದಂಡ ವಿಧಿಸಿ ಮುಂದೆ ಅಕ್ರಮ ಗಣಿಗಾರಿಕೆ ನಡೆಯದಂತೆ ಎಚ್ಚರಿಕೆಯನ್ನು ಕೊಟ್ಟಿದ್ದರೂ ಸಹ ಇಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿತ್ತು.
ಈ ಹಿನ್ನೆಲೆಯಲ್ಲಿ ಜೂನ್ 22ರ ಮಂಗಳವಾರದಂದು ಗಣಿ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಹಾಗೂ ಮಲ್ಪೆ ಪೋಲಿಸ್ ಠಾಣಾ ಸಿಬ್ಬಂದಿಗಳ ನೇತೃತ್ವದಲ್ಲಿಈ ದಾಳಿ ನಡೆಸಲಾಗಿದ್ದು, "ಮರಳು ತೆಗೆಯಲು ಬಳಸಿದ್ದ ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ" ಎಂದು ಗಣಿ ಇಲಾಖಾ ಅಧಿಕಾರಿ ಮಹೇಶ್ ದಾಯ್ಜಿವಲ್ಡ್ಗೆ ಮಾಹಿತಿ ನೀಡಿದ್ದಾರೆ.