ಮಂಗಳೂರು, ಜೂ 23 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಅಪರಾಹ್ನ 2ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಲಾಕ್ ಡೌನ್, ಸ್ತಬ್ಧಗೊಂಡಿದ್ದ ಜಿಲ್ಲೆಯ ವಾಣಿಜ್ಯ ವಹಿವಾಟು ಸುಮಾರು ಎರಡು ತಿಂಗಳ ಬಳಿಕ ಪುನಾರಂಭಗೊಂಡಿದೆ.
ದಿನಸಿ, ತರಕಾರಿ, ಮೆಡಿಕಲ್ ಶಾಪ್ಗಳು ಮಾತ್ರ ಲಾಕ್ಡೌನ್ ಆರಂಭವಾದಾಗಿನಿಂದಲೂ ಜಿಲ್ಲಾದ್ಯಂತ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ ಉಳಿದ ಯಾವ ಅಂಗಡಿಗಳನ್ನು ತೆರೆಯಲು ಅವಕಾಶ ಇರಲಿಲ್ಲ ಈಗ ನಿಯಮ ಸಡಿಲಗೊಳಿಸಿರುವುದು ಹಾಗೂ ಕೆಲವೊಂದು ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ಆರ್ಥಿಕ ಚಟುವಟಿಕೆ ಗರಿಗೆದರುವ ಲಕ್ಷಣಗಳಿವೆ.
ಆರ್ಥಿಕ ಚಟುವಟಿಕೆಗೆ ಅವಕಾಶ ಸಿಕ್ಕಿದ್ದರಿಂದ ಅಂಗಡಿ ಮಾಲೀಕರು ಬಾಗಿಲು ತೆರೆದು ವ್ಯಾಪಾರಕ್ಕೆ ಅಣಿಯಾಗಿದ್ದಾರೆ. ಆದರೆ, ಕೆಲವೊಂದು ಅಂಗಡಿ ಹೊರತುಪಡಿಸಿ ಉಳಿದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಬಹಳ ವಿರಳವಾಗಿದೆ. ವಸ್ತ್ರಮಳಿಗೆ, ಪಾದರಕ್ಷೆಗಳ ಅಂಗಡಿಗಳು ಬೆಳಗ್ಗೆಯೇ ತೆರೆದುಕೊಂಡಿದ್ದು, ಸಾಮಗ್ರಿಗಳನ್ನು ಜೋಡಿಸಿಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವುದು ಕಂಡುಬರುತ್ತಿದೆ.
ಅಪರಾಹ್ನ 2ರವರೆಗೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಕೆಲವೊಂದು ನಿರ್ಬಂಧಗಳನ್ನು ಜಿಲ್ಲಾಡಳಿತ ವಿಧಿಸಿದೆ. ಅಂದರೆ ಎಸಿ (ಏರ್ ಕಂಡಿಷನ್ಡ್) ಅಂಗಡಿಗಳು ಹಾಗೂ ಎಸಿ ಹೊಂದಿರುವ ಶಾಪ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು ಮತ್ತು ಮಾಲ್ಗಳ ಕಾರ್ಯಾಚರಣೆಗೆ ಅವಕಾಶವಿರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ತೆರೆದ ಹೊಟೇಲ್ಗಳು: ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೊಟೇಲ್ಗಳನ್ನು ತೆರೆಯಲೂ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕೆಲವೊಂದು ಹೊಟೇಲ್ಗಳು ಇಂದು ತೆರೆದುಕೊಂಡಿದೆ. ಆದರೆ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಗ್ರಾಹಕರು ಮೀರುವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.