ಮಂಗಳೂರು, ಜೂ.22 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲರಿಗೆ ಉಚಿತ ಲಸಿಕೆ ನೀಡಬೇಕು. ಲಸಿಕೆ ಹೆಸರಿನಲ್ಲಿ ವ್ಯಾಪಾರ ನಡೆಸಬಾರದು, ಜಿಲ್ಲೆಯಲ್ಲಿ ಲಸಿಕೆ ಉಚಿತವಾಗಿ ನೀಡದಿದ್ದರೆ ಕಾಂಗ್ರೆಸ್ನಿಂದ ಪ್ರತಿಭಟನೆ ನದೆಸಲಾಗುವುದು ಎಂದು ಮಾಜಿ ಶಾಸಕ ಐವನ್ ಡಿ ಸೋಜ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿ ತಕ್ಷಣ ಬಸ್ ಸಂಚಾರ ಆರಂಭಿಸಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು" ಎಂದರು.
ಇನ್ನು ಅನ್ಲಾಕ್ ಆಗಬೇಕಿದ್ದ ಜಿಲ್ಲೆ ಇನ್ನೂ ಲಾಕ್ ಆಗಿದ್ದು, ಇದಕ್ಕೆ ಜಿಲ್ಲೆಯ ಅಧಿಕಾರಿಗಳು, ಶಾಸಕರು ಸಂಸದರು, ಹಾಗೂ ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯ ಕಾರಣ ಎಂದಿದ್ದಾರೆ.
ಮದುವೆ, ಅಂತ್ಯ ಸಂಸ್ಕಾರಕ್ಕೆ ನಿಗದಿ ಪಡಿಸಿದ ಮಾನ ದಂಡವನ್ನು ಸಡಿಲಗೊಳಿಸಬೇಕು. ಮದುವೆಗೆ ಕನಿಷ್ಠ 100 ಜನರಿಗೆ ಅವಕಾಶ ನೀಡಬೇಕು. ಮನೆಮನೆಗೆ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ ,ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾಂಗ್ರೆಸ್ ಮುಖಂಡರಾದ ಅಪ್ಪಿ, ಭಾಸ್ಕರ ರಾವ್, ಯೂಸುಫ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.