ಕುಂದಾಪುರ, ಜೂ.22 (DaijiworldNews/HR): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಂತೆ ಸಹಕಾರ ವ್ಯವಸ್ಥೆಯಲ್ಲಿ ಸದಸ್ಯರೇ ಪ್ರಭುಗಳು. ಸಹಕಾರ ಸಂಘ ಉತ್ತುಂಗಕ್ಕೆರಲು ಸದಸ್ಯರ ಪಾತ್ರ ಮಹತ್ವದ್ದು. ಸಂಘದ ಬೆಳವಣಿಗೆಯ ಲಾಭಾಂಶದಲ್ಲಿ ಸಮಾಜಮುಖಿ ಕಾರ್ಯಕ್ಕೆ ಬಳಸುವುದು ಸಹಕಾರಿ ಧರ್ಮ ಎಂದು ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿಶ್ಚಯಿಸಿರುವುದು ಶ್ಲಾಘನಾರ್ಹವಾಗಿದೆ.
ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಕೊರೊನಾದಿಂದ ಮೃತಪಟ್ಟ 8 ವ್ಯಕ್ತಿಗಳ ಕುಟುಂಬಕ್ಕೆ ಸಂಘವು ನೀಡಿದ ಆರ್ಥಿಕ ನೆರವನ್ನು ವಿತರಿಸಿ ಮಾತನಾಡಿದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ, "ಕೊರೊನಾದಿಂದ ಮೃತಪಟ್ಟ ಸಂಘದ ವ್ಯಾಪ್ತಿಯ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿರುವುದು ಸಹಕಾರ ವ್ಯವಸ್ಥೆಯಲ್ಲಿ ರಾಜ್ಯದಲ್ಲಿಯೇ ಮೊದಲು" ಎಂದು ಅಭಿಪ್ರಾಯಪಟ್ಟರು.
ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್.ಮಂಜಯ್ಯ ಶೆಟ್ಟಿ ಮಾತನಾಡಿ, "ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇವತ್ತು ಉತ್ತಮ ಬೆಳವಣೆಗೆ ಕಂಡುಕೊಂಡಿದೆ. ಒಳ್ಳೆಯ ಲಾಭಾಂಶವೂ ಬಂದಿದೆ. ಸದಸ್ಯರ ಉತ್ತಮ ಸಹಕಾರದಿಂದ ಇದು ಸಾಧ್ಯವಾಗಿದೆ. ಕೊರೋನಾದಿಂದ ಆಲೂರಿನಲ್ಲಿ ಎಂಟು ಜನ ಕುಟುಂಬಗಳಿಗೆ ಆಧಾರವಾಗಿದ್ದ ವ್ಯಕ್ತಿಗಳು ಮೃತ ಪಟ್ಟಿದ್ದಾರೆ. ಇದು ಅತೀವ ದುಃಖದ ವಿಚಾರ. ಇನ್ನು ವ್ಯಥಿಸಿ ಪ್ರಯೋಜನವಿಲ್ಲ. ಮುಂದಿನ ಜೀವನದ ಬಗ್ಗೆ ನಾವು ಯೋಚನೆ ಮಾಡಬೇಕು. ಆ ಹಿನ್ನೆಲೆಯಲ್ಲಿ ಕೊರೊನಾದಿಂದ ಮೃತರಾದ ವ್ಯಕ್ತಿಗಳ ಕುಟುಂಬಕ್ಕೆ ತಲಾ ರೂ.10 ಸಾವಿರ ನೆರವು ನೀಡುವ ತೀರ್ಮಾನ ಆಡಳಿತ ಮಂಡಳಿ ಮಾಡಿದ್ದು ಇದೊಂದು ಸಣ್ಣ ಮೊತ್ತವಾದರೂ ಕೂಡಾ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವುದರ ದ್ಯೋತಕ. ಮುಂದೆಯೂ ಕೂಡಾ ನಿಮ್ಮ ಜೊತೆ ಸಂಘ ಇರುತ್ತದೆ. ಅಗತ್ಯ ನೆರವು ನೀಡಲು ಸಂಘ ಬದ್ದವಾಗಿದೆ ಎಂದ ಅವರು ಈ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಯತ್ನ ಮಾಡಲಾಗುವುದು" ಎಂದರು.
ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎನ್.ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ರತ್ನಾಕರ ಎಂ.ಆಚಾರ್ಯ, ಹೆಚ್.ಶಂಕರ್ ಶೆಟ್ಟಿ, ಎಂ.ಚಂದ್ರಶೇಖರ ಶೆಟ್ಟಿ, ಗಂಗಾಧರ ಆಚಾರ್ಯ, ಸುಬ್ಬ ಪೂಜಾರಿ, ರಾಜೇಶ ದೇವಾಡಿಗ, ಅಮರನಾಥ ಶೆಟ್ಟಿ, ಸುರೇಂದ್ರ, ಹರೀಶ್, ಲಲಿತಾ ಕುಲಾಲ್, ಅಕ್ಕಯ್ಯ ಯಾನೆ ಆಶಾ ಉಪಸ್ಥಿತರಿದ್ದರು.