ಉಡುಪಿ, ಜೂ 22 (DaijiworldNews/MS): "ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ವಿನಯ್ ಕುಮಾರ್ ಸೊರಕೆ ಪ್ರಬುದ್ಧವಾಗಿ ಮಾತನಾಡಿದರೆ ಅವರಿಗೂ ಒಳ್ಳೆಯದು. ಅವರ ಮಾತಿಗೆ ನಮ್ಮ ಕಾರ್ಯಕರ್ತರು ಉತ್ತರ ಕೊಡಲು ಹೋದರೆ ಸೊರಕೆಯವರು ಮತ್ತೆ ಪುತ್ತೂರಿಗೆ ವಾಪಾಸ್ ಹೋಗಬೇಕಾಗುತ್ತದೆ" ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ್ಯ ಕುಯಿಲಾಡಿ ಸುರೇಶ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ಶಿರ್ವದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಕುರಿತು ನಡೆದಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಅವರು ರಾಮಮಂದಿರದ ನಿರ್ಮಾಣದ ವಿಚಾರದಲ್ಲಿ ಮಾತನಾಡಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಕುಯಿಲಾಡಿ ಸುರೇಶ್ ನಾಯಕ್ "ಸೊರಕೆಯವರು ಕಾಪುವಿನಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಮಾತುಗಳನ್ನು ಹೇಳಬಾರದು. ಅವರು ನಾಜೂಕಾಗಿ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಅವರಿಗೂ ಕಷ್ಟ ಆಗಬಹುದು. ರಾಜಕಾರಣವನ್ನು ನಾವೂ ಸ್ವಾಗತಿಸುತ್ತೇವೆ ಆದರೆ ದೈವ-ದೇವರ ವಿಚಾರದಲ್ಲಿ ಮಾತನಾಡುವಾಗ ಎಚ್ಚರ ಇರಲಿ. ಪೆಟ್ರೋಲ್ ಬೆಲೆ ಏರಿಕೆ ಕುರಿತಾದ ಪ್ರತಿಭಟನೆಯಲ್ಲಿ ಅದಕ್ಕೆ ಸಂಬಂಧಪಟ್ಟ ವಿಚಾರ ಮಾತನಾಡಲಿ. ತಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಹೀಗೆ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಮಾತನ್ನಾಡಿದರೆ ಅದು ಅವರಿಗೂ ಒಳ್ಳೆಯದಿರುವುದಿಲ್ಲ. ರಾಮ ಮಂದಿರದ ನಿರ್ಮಾಣಕ್ಕಾಗಿ ಹಿಂದೂಗಳು ದೇಶದೆಲ್ಲೆಡೆಯಲ್ಲಿ ಹಣ ಸಂಗ್ರಹ ಮಾಡುತಿದ್ದಾರೆ. ವಿನಯ್ ಕುಮಾರ್ ಸೊರಕೆ ಕೂಡಾ ಹಿಂದೂ ಅಲ್ಲವೇ? ಅವರು ಎಷ್ಟು ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ನ ಕೊಡುಗೆ ಏನು?. ಹಿಂದೂಗಳ ಭಾವನೆ ಬಗ್ಗೆ ಸೊರಕೆ ನಿಲುವೇನು?. ಕಾಪುವಿನಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ವೊಟ್ ಹೆಚ್ಚು ಇದೆ ಎಂದು ಯಾರನ್ನೋ ಓಲೈಸಲು ಹೋಗಿ ಹಿಂದೂಗಳ ಭಾವನೆಗೆ ಘಾಸಿ ಮಾಡಬಾರದು. ಇದು ವಿಕೋಪಕ್ಕೆ ಹೋದರೆ ನಾವು ಕೂಡಾ ಸೊರಕೆಯವರನ್ನು ಟಾರ್ಗೆಟ್ ಮಾಡಬೇಕಾಗುತ್ತದೆ" ಎಂದವರು ಎಚ್ಚರಿಸಿದರು.
ಯಡಮೊಗೆ ಕೊಲೆ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಇರುವುದರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು "ಘಟನೆ ನಡೆದ ದಿನದಿಂದ ಕೂಡಾ ಬಿಜೆಪಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದೆ. ಕೊಲೆಯಾದವರ ಮನೆಗೂ ನಮ್ಮ ಬೈಂದೂರಿನ ಕಾರ್ಯಕರ್ತರು ಭೇಟಿ ನೀಡಿ ಒಂದು ಲಕ್ಷ ರುಪಾಯಿ ಪರಿಹಾರವನ್ನು ನೀಡಿದೆ. ಇರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಸತ್ತವರ ಬಗ್ಗೆ ನಮಗೆ ಸಹಾನೂಭೂತಿ ಕೂಡಾ ಇದೆ. ಕಾಂಗ್ರೆಸ್ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಮತ್ತು ಗೋಪಾಲ ಪೂಜಾರಿಯವರು ಅಲ್ಲಿ ಪದೇ ಪದೇ ಹೋಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತಿದ್ದಾರೆ. ಪೋಲಿಸ್ ತನಿಖೆ ಪ್ರಗತಿಯಲ್ಲಿದೆ. ಸತ್ಯ ಹೊರಗೆ ಬರುತ್ತದೆ. ಸುಖಾಸುಮ್ಮನೇ ಆರೋಪ ಹೊರಿಸಬಾರದು. ಬಿಜೆಪಿ ಆರೋಪಿಗಳನ್ನು ರಕ್ಷಿಸುವುದಿಲ್ಲ" ಎಂದರು.
ಜೂನ್ 23 ರಿಂದ ಜುಲೈ 6 ರ ತನಕ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯ ತಿಥಿ ಮತ್ತು ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಸುಮಾರು 25 ಸಾವಿರ ಸಸಿಗಳನ್ನು ನೆಡಲಾಗುವುದು. ಜೂನ್ 25 ರಂದು ತುರ್ತು ಪರಿಸ್ಥಿತಿಯ ದಿನವನ್ನು ಕರಾಳ ದಿನವಾಗಿಆಚರಿಸಲಾಗುವುದು. ಅದೇ ರೀತಿ ಈ ಬಾರಿಯ ಮನ್-ಕಿ-ಬಾತ್ ಕಾರ್ಯಕ್ರಮವನ್ನು ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಲಿಸುವಂತೆ ವ್ಯವಸ್ಥೆ ಮಾಡಲಾಗುವುದು" ಎಂದರು
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೀರ್ಕಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.