ಉಳ್ಳಾಲ, ಜೂ.21 (DaijiworldNews/HR): ಕೊರೊನಾದಿಂದ ಮೃತಪಟ್ಟ 12 ಮಂದಿಗೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಸಂಪ್ರದಾಯದಂತೆ ಸೋಮನಾಥನ ಸನ್ನಿಧಿಯಲ್ಲಿ ಅವರ ಚಿತಾಭಸ್ಮವನ್ನು ಸಮುದ್ರಕ್ಕೆ ಬಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕೊರೊನಾ ಸೋಂಕಿಗೆ ಬಲಿಯಾದ 12 ಮಂದಿ ನಿರ್ಗತಿಕರಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಮುದ್ರ ತೀರದಲ್ಲಿ ನಡೆಸಿದ ತಿಲಹೋಮ ಮತ್ತು ಚಿತಾಭಸ್ಮವನ್ನು ಸಮುದ್ರಕ್ಕೆ ಬಿಟ್ಟು ಬಳಿಕ ಮಾತನಾಡಿದ ಅವರು, "ಮೃತ ನಿರ್ಗತಿಕರ ಅಂತರಾತ್ಮಗಳಿಗೆ ಮೋಕ್ಷಪ್ರದ ಆಗಬೇಕು. ನಿರ್ಗತಿಕರು ಮಾತ್ರವಲ್ಲದೆ ಕುಟುಂಬಸ್ಥರು ಬಾರದ ಮಂದಿಯ ಆತ್ಮಕ್ಕೆ ಸದ್ಗತಿ ಸಿಗುವ ಉದ್ದೇಶದಿಂದ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಈ ಕಾರ್ಯವನ್ನು ನಡೆಸಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 12 ಮಂದಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಎಲ್ಲರ ಚಿತಾಭಸ್ಮವನ್ನು ಸೋಮೇಶ್ವರದ ಸಮುದ್ರಕ್ಕೆ ಸಮರ್ಪಣೆ ಮಾಡಲಾಗಿದೆ" ಎಂದರು.
ತಾ.ಪಂ ಸದಸ್ಯ ರವಿಶಂಕರ್ ಸೋಮೇಶ್ವರ ತಿಲ ಹೋಮದಲ್ಲಿ ಕುಳಿತರು.
ಈ ಸಂದರ್ಭ ದಿ. ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ , ಜಿ.ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಸಹಾಯಕ ಆಯುಕ್ತ ಮದನ್ ಮೋಹನ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಜಿ.ಪಂ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಜೆಪಿ ಮುಖಂಡರುಗಳಾದ ಸತೀಶ್ ಕುಂಪಲ, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಈಶ್ವರ್ ಕಟೀಲ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ಹೌಸ್, ಕಂದಾಯ ನಿರೀಕ್ಷಕ ಸ್ಟೀಫನ್ , ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಗ್ರಾಮಕರಣಿಕ ಲಾವಣ್ಯ, ಹಾಗೂ ಹೇಮಂತ್ ಶೆಟ್ಟಿ, ಯಶವಂತ್ ಅಮೀನ್, ಸಚಿನ್ ಮೋರೆ ಉಪಸ್ಥಿತರಿದ್ದರು.