ಧರ್ಮಸ್ಥಳ, ಜೂ 21 (DaijiworldNews/PY): ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸುವ ಯಾತ್ರಾರ್ಥಿಗಳನ್ನು ನಿಯಂತ್ರಿಸುವ ಸಲುವಾಗಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ಜೂನ್ 20ರ ಶನಿವಾರ ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತುರ್ತುಸಭೆ ನಡೆಯಿತು.
ಸಭೆಯಲ್ಲಿ, "ಹೊರ ಜಿಲ್ಲೆಗಳಿಂದ ದೇವಸ್ಥಾನಕ್ಕೆ ಆಗಮಿಸುವ ಯಾತ್ರಾರ್ಥಿಗಳು ಸಂಖ್ಯೆ ನಿಯಂತ್ರಿಸುವ ಸಲುವಾಗಿ ಧರ್ಮಸ್ಥಳ ಪೊಲೀಸ್ ಠಾಣೆಯ ಹಾಗೂ ಪೊಲೀಸ್ ಠಾಣೆಯ ಅಧಿಕಾರಿ ವರ್ಗದವರು ಹೊರಜಿಲ್ಲೆಗಳಿಂದ ಬರುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಯಾತ್ರಾರ್ಥಿಗಳನ್ನು ಹಿಂದಕ್ಕೆ ಕಳುಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಗುಂಡ್ಯ ಚೆಕ್ ಪೋಸ್ಟ್ ಸೇರಿದಂತೆ ಚರ್ಮಾಡಿ ಚೆಕ್ ಪೋಸ್ಟ್, ನಾರಾವಿ ಚೆಕ್ ಪೋಸ್ಟ್, ಸಂಪಾಜೆ ಚೆಕ್ ಪೋಸ್ಟ್ಗಳಲ್ಲಿ ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ ಬಗ್ಗೆ ಜಿಲ್ಲಾಡಳಿತದಿಂದ ಬ್ಯಾನರ್ಗಳನ್ನು ಹಾಕಿ ಪ್ರಚಾರ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಲಾಯಿತು.
"ಲಾಕ್ಡೌನ್ ಹಿನ್ನೆಲೆ ದೇವಾಲಯದ ಮುಖ್ಯ ಪ್ರವೇಶ ದ್ವಾರಗಳಲ್ಲಿ, ದೇವಾಲಯ ಹಾಗೂ ಅನ್ನಛತ್ರ, ವಸತಿಗೃಹಗಳಿ ಪ್ರವೇಶವಿಲ್ಲ ಎನ್ನುವ ಬ್ಯಾನರ್ಗಳನ್ನು ದೇವಸ್ಥಾನದ ಆಡಳಿತದ ಮುಖೇನ ಪ್ರಚಾರ ಪಡಿಸಬೇಕು. ದೇವಸ್ಥಾನದ ಆಡಳಿತದ ವತಿಯಿಂದ ದೃಶ್ಯ ಹಾಗೂ ಮಾಧ್ಯಮಗಳಲ್ಲಿ ಭಕ್ತರಿಗೆ ಸೂಚನೆಗಳನ್ನು ನೀಡಬೇಕು" ಎಂದು ಹೇಳಲಾಯಿತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, "ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ, ದೇವಾಲಯ ಸೇರಿದಂತೆ ಮಸೀದಿ, ಚರ್ಚ್ ಹಾಗೂ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ರ್ಸಾಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಧಾರ್ಮಿಕ ಕೇಂದ್ರಗಳಿಗೆ ಎರಡು ವಾರಗಳ ಕಾಲ ಪ್ರವೇಶವಿಲ್ಲ" ಎಂದಿದ್ದಾರೆ.