ಉಡುಪಿ, ಜೂ. 20 (DaijiworldNews/HR): ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 4 ಕಾಲು ಸೇತುವೆ ರಚನೆಗೆ 4.36 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರಕಾರ ಮಂಜೂರು ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಲವಾರು ಭಾಗಗಳಲ್ಲಿ ಕ್ರಾಸಿಂಗ್ಗಳನ್ನು ನಿರ್ಮಾಣ ಮಾಡುವ ಅಗತ್ಯತೆ ಇದ್ದು, ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ವಿನಂತಿ ಮಾಡಲಾಗಿತ್ತು.
ಕ್ಷೇತ್ರದ ಜನರ ಅಪೇಕ್ಷೆಯ ಮೇರೆಗೆ ಮಾಡಿದ ಮನವಿಯನ್ನು ಪುರಸ್ಕರಿಸಿ ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಒಟ್ಟು ರೂ. 4.36 ಕೋಟಿಗಳ ವೆಚ್ಚದಲ್ಲಿ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದದಾರೆ.
ಬಡಾ ಎರ್ಮಾಳ್, ಕಾಪು ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು), ಆನೆಗುಡ್ಡೆ, ಕುಂದಾಪುರ ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು), ಮಹೇಶ್ ಆಸ್ಪತ್ರೆಯ ಬಳಿ, ಉಡುಪಿ ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು), ಅಂಬಾಗಿಲು, ಉಡುಪಿ ವಿಧಾನಸಭಾ ಕ್ಷೇತ್ರ (ರೂ. 1.08 ಕೋಟಿಗಳು) ಈ 4 ಕಾಲು ಸೇತುವೆಗಳಿಗೆ ಅನುದಾನ ಮಂಜೂರು ಮಾಡಲಾಗಿದೆ.
ಜನ ಸಂಚಾರ ಹೆಚ್ಚಿರುವ ಈ ಮೇಲಿನ ಪ್ರದೇಶಗಳಲ್ಲಿ, ರಸ್ತೆಯನ್ನು ದಾಟಲು ಜನಸಾಮಾನ್ಯರಿಗೆ ಸಹಾಯಕವಾಗುವಂತೆ ಸ್ಟೀಲ್ ಪಾದಚಾರಿ ಕಾಲುಸೇತುವೆಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.