ಮಂಗಳೂರು, ಜೂ. 20 (DaijiworldNews/HR): ಲಾಕ್ಡೌನ್ ಮತ್ತು ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ, ಜನರು ಅನಗತ್ಯವಾಗಿ ಪ್ರಯಾಣಿಸದಂತೆ ಪೊಲೀಸರು ಜಿಲ್ಲಾ ಗಡಿ ಮತ್ತು ಇತರ ಸ್ಥಳಗಳಲ್ಲಿ ವಾಹನಗಳ ತಪಾಸಣೆ ಹೆಚ್ಚಿಸಿದ್ದಾರೆ.
ಇತರ ಜಿಲ್ಲೆಗಳಿಂದ ಅನೇಕ ಪ್ರವಾಸಿಗರು ದಕ್ಷಿಣ ಕನ್ನಡಕ್ಕೆ ಕಾರಣವಿಲ್ಲದೆ ಆಗಮಿಸುತ್ತಿದ್ದಾರೆ ಎಂಬ ವರದಿಗಳು ಬರುತ್ತಿದ್ದು, ಜೂನ್ 19 ರ ಶನಿವಾರ ಮತ್ತು ಜೂನ್ 20 ರ ಭಾನುವಾರ ಮಧ್ಯ ರಾತ್ರಿ ಗುಂಡ್ಯಾ ಚೆಕ್ಪೋಸ್ಟ್ನಲ್ಲಿ ಪೊಲೀಸರು ಹಲವಾರು ವಾಹನಗಳನ್ನು ಪರಿಶೀಲಿಸಿದ್ದಾರೆ.
ಈ ಕಾರುಗಳಲ್ಲಿದ್ದ ಹಲವಾರು ಪ್ರಯಾಣಿಕರು ವೈದ್ಯಕೀಯ ಕಾರಣಗಳಿಗಾಗಿ ಮಂಗಳೂರಿಗೆ ಬರುತ್ತಿದ್ದೇವೆಂದು ಹೇಳಲಾಗಿದೆ, ಆದರೆ ಅವರು ನಿಜವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಧ್ಯರಾತ್ರಿ ಮತ್ತು ಮುಂಜಾನೆ 3 ರ ನಡುವೆ ಧರ್ಮಸ್ಥಳ ದೇವಸ್ಥಾನದತ್ತ ಸಾಗುತ್ತಿದ್ದ 69 ವಾಹನಗಳನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಡಿಸಿ ಸೂಚನೆಯಂತೆ ಎಲ್ಲಾ ಜಿಲ್ಲಾ ಗಡಿಗಳಲ್ಲಿ ಮತ್ತು ಚಾರ್ಮಡಿ ಘಾಟ್ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉಜಿರೆಯಲ್ಲಿ ಕೂಡ ಕಟ್ಟುನಿಟ್ಟಾದ ವಾಹನ ಪರಿಶೀಲನೆ ಪ್ರಗತಿಯಲ್ಲಿದೆ.
ಕಳೆದ ಎರಡು ಮೂರು ದಿನಗಳಿಂದ ಧರ್ಮಸ್ಥಳ ಮತ್ತು ಸುಬ್ರಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಲು ಇತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಮಾಹಿತಿಯ ಹಿನ್ನೆಲೆಯಲ್ಲಿ ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.