ಕಾಸರಗೋಡು, ಜೂ.19 (DaijiworldNews/HR): ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಶರತ್ ಲಾಲ್ ಮತ್ತು ಕೃಪೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮೂವರು ಆರೋಪಿಗಳ ಪತ್ನಿಯರಿಗೆ ಕಾಸರಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉದ್ಯೋಗ ನೀಡಲಾಗಿದ್ದು, ಸಿಪಿಎಂನ ಶಿಫಾರಸಿನೊಂದಿಗೆ ಇವರಿಗೆ ಉದ್ಯೋಗ ಲಭಿಸಿರುವುದಾಗಿ ಕಾಂಗ್ರೆಸ್ ಆರೋಪಿಸಿದ್ದು, ಹೋರಾಟಕ್ಕೆ ಮುಂದಾಗಿದೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಪಿಎಂ ಮುಖಂಡ ಎಂ.ಪೀತಾಂಬರನ್, ಎರಡನೇ ಆರೋಪಿ ಸಿ. ಜೆ ಸಜಿ, ಮೂರನೇ ಆರೋಪಿ ಸುರೇಶ್ನ ಪತ್ನಿಯರಿಗೆ ಉದ್ಯೋಗ ಲಭಿಸಿದೆ.
ಈ ಹಿಂದೆ ತಯಾರಿಸಿದ ಪಟ್ಟಿಯಲ್ಲಿ ಪಾರ್ಟ್ ಟೈಂ ಸ್ವೀಪರ್ ಆಗಿ ನೇಮಿಸಿತ್ತು. ಈ ನಡುವೆ ಸಿಪಿಎಂ ನೇತೃತ್ವದ ಕಾಸರಗೋಡು ಜಿಲ್ಲಾ ಪಂಚಾಯತ್ ಇವರನ್ನು ಆರು ತಿಂಗಳಿಗೆ ತಾತ್ಕಾಲಿಕ ಉದ್ಯೋಗಕ್ಕೆ ನೇಮಿಸಿದ್ದು, ಈ ನೇಮಕಾತಿ ಬಗ್ಗೆ ಕಾಂಗ್ರೆಸ್ ಹಾಗೂ ಯುಡಿಎಫ್ ಪ್ರತಿಭಟನೆಗೆ ಮುಂದಾಗಿದ್ದು, ಶನಿವಾರ ಜಿಲ್ಲಾಸ್ಪತ್ರೆಗೆ ಜಾಥಾ ನಡೆಸಿತು.
ಈ ಕೊಲೆ ಪ್ರಕರಣದ ತನಿಖೆಯನ್ನು ಈಗ ಸಿಬಿಐ ನಡೆಸುತ್ತಿದೆ.