ಮಂಗಳೂರು, ಜೂ. 19 (DaijiworldNews/HR): ಧಾರ್ಮಿಕ ಕ್ಷೇತ್ರಗಳಿಗೆ ಮುಂದಿನ ಎರಡು ವಾರಗಳ ಕಾಲ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿಯೊಂದಿಗಿನ ವೀಡಿಯೋ ಸಂವಾದದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅನ್ಲಾಕ್ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆದಿಲ್ಲ. ಮಳೆ, ಪ್ರಕೃತಿ ವಿಕೋಪ ಕುರಿತು ಇಂದು ಜನಪ್ರತಿನಿಧಿಗಳ ಚರ್ಚೆ ಆಗಿದೆ. ಅಧಿಕೃತವಾಗಿ ಸರ್ಕಾರದ ಆದೇಶ ಬಂದ ಬಳಿಕವೇ ಅನ್ಲಾಕ್ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು.
"ಧಾರ್ಮಿಕ ಕ್ಷೇತ್ರಗಳಿಗೆ ಮುಂದಿನ ಎರಡು ವಾರಗಳ ಕಾಲ ಅವಕಾಶ ನೀಡಲಾಗುವುದಿಲ್ಲ, ಧರ್ಮಸ್ಥಳ, ಸುಬ್ರಹ್ಮಣ್ಯ ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹೊರ ಜಿಲ್ಲೆಯ ಭಕ್ತಾಧಿಗಳಿಗೆ ದೇಗುಲಗಳಿಗೆ ಬರಲು ಅವಕಾಶ ಇಲ್ಲ ಹಾಗೂ ಹೊರಗಿನಿಂದ ಬರುವ ವಾಹನ ಸೀಝ್ ಮಾಡಲು ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ಇನ್ನು "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,931 ಪ್ರಸ್ತುತ ಪ್ರಕರಣಗಳಿದ್ದು, 836 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5645 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. ಜಿಲ್ಲೆಯಲ್ಲಿ ಶೇ.16ರಿಂದ ಶೇ.8ಕ್ಕೆ ಪಾಸಿಟಿವಿಟಿ ರೇಟ್ ಇಳಿದಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ 12 ಶೇಕಡ ಪಾಸಿಟಿವಿಟಿ ರೇಟ್ ಹಾಗೂ ಇತರೆ ತಾಲೂಕಿನಲ್ಲಿ 6 ಶೇಕಡ ಪಾಸಿಟಿವಿಟಿ ರೇಟ್ ಇದೆ" ಎಂದು ಮಾಹಿತಿ ನೀಡಿದ್ದಾರೆ.