ಮಂಗಳೂರು, ಜೂ. 19 (DaijiworldNews/HR): ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಯವರ ಹುಟ್ಟುಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಸವಾನ್ ಎಸ್. ಕೆ. ಹಾಗೂ ರಮಾನಂದ ಪೂಜಾರಿಯವರ ಸಹಕಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗವಿಕಲ ರೋಗಿಗಳಿಗೆ ಉಚಿತ ವಾಕರ್ (ಊರುಗೋಲು)ಗಳನ್ನು ಮತ್ತು ಇನ್ನಿತರ ಸಲಕರಣೆಗಳನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಲೋಬೊ, "ಕಾಂಗ್ರೆಸ್ ನ ಪರಮೋಚ್ಚ ನಾಯಕರಾದ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ದಿನ ಯುವ ಕಾಂಗ್ರೆಸ್ ಪದಾಧಿಕಾರಿಗಳು ಆಸ್ಪತ್ರೆಗಳಲ್ಲಿರುವ ಚಿಕಿತ್ಸೆ ಪಡೆಯುತ್ತಿರುವ ಅಂಗ ವ್ಯಫಲ್ಯ ಇದ್ದವರಿಗೆ ನಡೆಯಲು ಸಹಾಯವಾಗುವ ವಾಕರ್ ಗಳನ್ನು ಮತ್ತು ಇನ್ನಿತರ ಸಲಕರಣೆಗಳನ್ನು ನೀಡುವ ಮೂಲಕ ಜನ ಮೆಚ್ಚುವಂತಹ ಕಾರ್ಯವನ್ನು ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ.ಇದರಿಂದ ಬಡ ರೋಗಿಗಳಿಗೆ ಬಹಳಷ್ಟು ಸಹಕಾರಿಯಾಗಿದೆ. ಅವರ ಜೀವನಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೂ ಒಳ್ಳೆಯ ಹೆಸರು ಮತ್ತು ಇತರ ಯುವಕರಿಗೆ ಇದೊಂದು ಮಾದರಿ" ಎಂದರು.
ಯುವ ನಾಯಕ ಮಿಥುನ್ ರೈ ಮಾತನಾಡಿ, "ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿದೆಡೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಷ್ಟ ಕಾಲದಲ್ಲಿ ಬಡ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮ ನಡೆಸುವುದರ ಮೂಲಕ ಜನ ಮೆಚ್ಚುವಂತ ಕೆಲಸವನ್ನು ಪಕ್ಷ ಮಾಡುತ್ತಿದೆ. ಇಂದಿನ ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ನಿರ್ಗತಿಕರಿಗೆ ಬೆಳಗಿನ ಹಾಗೂ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಒದಗಿಸುವುದರ ಮೂಲಕ ಬಹಳಷ್ಟು ನೆರವಾಗುವ ಕೆಲಸ ಪಕ್ಷ ಮಾಡುತ್ತಿದೆ" ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪ್ರಮುಖರಾದ ಟಿ. ಕೆ. ಸುಧೀರ್, ನೀರಜ್ ಚಂದ್ರ ಪಾಲ್, ಕೌಶಿಕ್ ಶೆಟ್ಟಿ, ಸಾಜಿದ್, ಉಕ್ಕಾಸ್, ನಾಗೇಂದ್ರ, ನಿತಿನ್ ಆಚಾರ್ಯ, ಗೌತಮ್,ಉದಯ್ ಬೋಳಾರ್, ಕೃತಿನ್ ಕುಮಾರ್, ಆಸ್ಟನ್ ಸಿಕ್ವೇರಾ, ಜೀವನ್ ಮೋರೆ, ಆಸೀಫ್ ಜೆಪ್ಪು, ಶಾನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.