ಉಜಿರೆ,ಜೂ. 19 (DaijiworldNews/HR): ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅನೇಕ ಸೇವಾಕಾರ್ಯಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಊರುಗಳಲ್ಲಿ ಕೊರೊನಾ ಆರೈಕೆ ಕೇಂದ್ರ, ಸೋಂಕಿತರು ಆಸ್ಪತ್ರೆಗೆ ಹೋಗಲು ಮತ್ತು ಮನೆಗೆ ಬರಲು ಉಚಿತ ವಾಹನ ಸೌಲಭ್ಯ, ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕಗಳ ಕೊಡುಗೆ ಇತ್ಯಾದಿ ಸೇವೆಗಳನ್ನು ಒದಗಿಸಲಾಗಿದೆ.
ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಿದ ಕೊರೊನಾ ಆರೈಕೆ ಕೇಂದ್ರಗಳು ಸೋಂಕಿತರಲ್ಲಿ ಭಯ-ಆತಂಕ ನಿವಾರಿಸಿ, ಎಲ್ಲರೂ ಸಂಪೂರ್ಣ ಗುಣಮುಖರಾಗಿ ಆರೋಗ್ಯ ಭಾಗ್ಯವನ್ನು ಹೊಂದಿದ್ದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದೆ. ಇದಕ್ಕೆ ಸಾಕ್ಷಿ ಧರ್ಮಸ್ಥಳದಲ್ಲಿ ರಜತಾದ್ರಿ ವಸತಿ ಗೃಹದಲ್ಲಿರುವ ಕೊರೊನಾ ಆರೈಕೆ ಕೇಂದ್ರ.
300 ಕೊಠಡಿಗಳನ್ನು ಹೊಂದಿದ್ದು, 600 ಹಾಸಿಗೆ ಗಳಿರುವ ವಸತಿಗೃಹವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೊರೊನಾ ಆರೈಕೆ ಕೇಂದ್ರಕ್ಕಾಗಿ ಉಚಿತವಾಗಿ ನೀಡಿದ್ದಾರೆ.
ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೊರೊನಾ ಸೋಂಕಿತರಾದ 120 ಪುರುಷರು ಹಾಗೂ 86 ಮಹಿಳೆಯರು ಸೇರಿದಂತೆ ಒಟ್ಟು 206 ಮಂದಿ ಧರ್ಮಸ್ಥಳದಲ್ಲಿ ಕೊರೊನಾ ಆರೈಕೆ ಕೇಂದ್ರದಲ್ಲಿ ಶುಶ್ರೂಷೆ ಪಡೆದು ಸಂಪೂರ್ಣ ಗುಣಮುಖರಾಗಿ ನವ ಚೈತನ್ಯದೊಂದಿಗೆ ಮರಳಿ ಸಿಯೋನ್ ಆಶ್ರಮಕ್ಕೆ ಮರಳಲಿದ್ದಾರೆ.
206 ಮಂದಿ ಸೋಂಕಿತರಲ್ಲಿ 10 ಮಂದಿ ವಿಕಲ ಚೇತನರು, 30 ಮಂದಿ ಎಪ್ಪತ್ತು ವರ್ಷಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಹಾಗೂ ಕೆಲವರು ಬುದ್ಧಿಮಾಂದ್ಯರೂ ಇದ್ದಾರೆ.
ಇನ್ನು ಪ್ರತಿ ದಿನ ಬೆಳಿಗ್ಗೆ ಉಪಾಹಾರ, 11 ಗಂಟೆಗೆ ಕಷಾಯ ಮತ್ತು ಬಿಸ್ಕೆಟ್, ಮಧ್ಯಾಹ್ನ ಊಟ, ಸಂಜೆ ಕಾಫಿ, ಟೀ, ಕಷಾಯ, ತಿಂಡಿ ಹಾಗೂ ರಾತ್ರಿ ಊಟ ಮತ್ತು ಊಟ ಮಾಡದವರಿಗೆ ಉಪಾಹಾರವನ್ನು ಧರ್ಮಸ್ಥಳದ ವತಿಯಿಂದ ಒದಗಿಸಲಾಗಿದೆ.
ಸಿರಿ ಸಂಸ್ಥೆಯ ಮೂಲಕ ಹೆಗ್ಗಡೆಯವರು ಎಲ್ಲರಿಗೂ ಉಚಿತ ಬಟ್ಟೆ ನೀಡಿ ಆಶೀರ್ವದಿಸಿದ್ದು, ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಶಾಸಕ ಹರೀಶ್ ಪೂಂಜ ರ ಸಹಕಾರದೊಂದಿಗೆ ಸೋಂಕಿತರಿಗೆ ಮನೆಯ ವಾತಾವರಣದ ಭಾವನೆ ಮೂಡಿಬರುವಂತೆ ಸ್ವಚ್ಛ ಹಾಗೂ ಪ್ರಶಾಂತ ಪರಿಸರದಲ್ಲಿ ಆರೋಗ್ಯಸೇವೆ ನೀಡಲಾಗಿದೆ.
ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯಧಿಕಾರಿ ಡಾ. ಕಲಾಮಧು ನೇತೃತ್ವದಲ್ಲಿ ಡಾ. ಆಕಾಶ್, ಡಾ. ಚೆನ್ನಕೇಶವ, ಡಾ. ಸುಮನಾ, ಡಾ. ಸೋನಾ ಮತ್ತು ಹಿರಿಯ ದಾದಿ ಗೀತಾ ಉತ್ತಮ ಸೇವೆ ನೀಡಿದ್ದಾರೆ.
ಧರ್ಮಸ್ಥಳದ ವತಿಯಿಂದ ಮೂರು ಜನ ದಾದಿಯರು, ಸಿಯೋನಾ ಆಶ್ರಮದ 10 ಮಂದಿ ದಾದಿಯರು ಕೂಡಾ ಸೇವೆ ನೀಡಿದ್ದಾರೆ. 8 ಜನ ಶಿಕ್ಷಕರೂ ಸೇವೆಯಲ್ಲಿ ನಿರತರಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ 10 ಮಂದಿ ಸದಸ್ಯರು ದಿನದ 24 ಗಂಟೆಯೂ ಸೇವೆಯಲ್ಲಿ ನಿರತರಾಗಿದ್ದರು. ಬೆಳ್ತಂಗಡಿ ತಹಸೀಲ್ದಾರ್ ಮಹೇಶ್, ಜೆ., ಇ. ಒ. ಕುಸುಮಾಧರ್ ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡಿದ್ದಾರೆ.
ಪಶುವೈದ್ಯ ಇಲಾಖೆಯ ಹಿರಿಯ ಅಧಿಕಾರಿ, ಧರ್ಮಸ್ಥಳದ ಡಾ. ಕೆ. ಜಯಕೀರ್ತಿ ಜೈನ್ ಮಾರ್ಗದರ್ಶಿ ಅಧಿಕಾರಿಯಾಗಿ, ಎಲ್ಲರ ಸಂಘಟಿತ ಪ್ರಯತ್ನ, ಸಹಕಾರದೊಂದಿಗೆ ಉತ್ತಮ ಸೇವೆ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸರಾವ್ ಹಾಗೂ ಸರ್ವ ಸದಸ್ಯರು, ಪಿ.ಡಿ.ಒ. ಉಮೇಶ್, ಕೆ. ಮತ್ತು ಟಾಸ್ಕ್ ಫೋರ್ಸ್ ಸದಸ್ಯರು ನಿರಂತರ ಸಹಕಾರ ಮತ್ತು ಸೇವೆ ನೀಡಿದ್ದಾರೆ.