ಉಡುಪಿ, ಜೂ 19(DaijiworldNews/MS): ರಾಜ್ಯದಲ್ಲಿ ಕೊರೊನಾ ಹಿನ್ನಲೆಯಲ್ಲಿ ಲಾಕ್ಡೌನ್ ಆರಂಭವಾಗಿ ಸುಮಾರು ಒಂದೂವರೆ ತಿಂಗಳುಗಳೇ ಕಳೆದಿವೆ. ಸಹಜ ಜೀವನಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಈಗಾಗಲೇ ಬಿಎಮ್ಟಿಸಿ, ಗ್ರಾಮಾಂತರ ಬಸ್ಸುಗಳ ಸಂಚಾರಕ್ಕೆ ನಿರ್ಬಂಧಿತ ಅನುಮತಿ ಸಿಕ್ಕಿರುವ ಹಿನ್ನಲೆಯಲ್ಲಿ ಅವಿಭಜಿತ ಜಿಲ್ಲೆಯಲ್ಲೂ ಬಸ್ಸು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದೇ ಎನ್ನುವ ಅಶಾವಾದ ಖಾಸಗಿ ಬಸ್ಸು ಮಾಲೀಕರನ್ನು ಹಾಗೂ ನೌಕರರದ್ದು.
ಅದರೂ ಬಸ್ಸುಗಳನ್ನು ಮತ್ತೆ ಚಲನಾಸ್ಥಿತಿಗೆ ತರಬೇಕೆಂದರೆ ಲಕ್ಷಾಂತರ ರೂಪಾಯಿ ಸುರಿಯಬೇಕಾದ ಅನಿವಾರ್ಯತೆ ಇದೆ. ಕಳೆದ ಎಪ್ರಿಲ್ ತಿಂಗಳಲ್ಲಿ ಲಾಕ್ಡೌನ್ ಆರಂಭವಾದ ನಂತರ ಗ್ಯಾರೇಜು, ಶೆಡ್ಸ್ ಸೇರಿದ್ದ ಬಸ್ಸುಗಳ ಸುತ್ತ ಬಳ್ಳಿಗಳು ಬೆಳೆಯುತ್ತಿದೆ. ಇನ್ನು ಕೆಲವು ಬಸ್ಸುಗಳ ರೂಫ್ ಮಳೆಯ ನೀರು ಬಿದ್ದು ಸೋರಲು ಪ್ರಾರಂಭವಾಗಿದೆ. ಇಂಜಿನ್ ಗಳು ಸ್ತಬ್ಧವಾಗಿದೆ. ಬಸ್ ಗಳ ಮೆಷಿನ್ ಗಳು ತುಕ್ಕು ಹಿಡಿದಿವೆ. ಇನ್ನು ಅದನ್ನು ಹೊರ ತೆಗೆಯ ಬೇಕಾದರೆ ಹೆಚ್ಚು ಕಡಿಮೆ ಒಂದು- ಒಂದೂವರೆ ಲಕ್ಷದಷ್ಟು ವ್ಯಯಿಸಬೇಕಾಗುತ್ತದೆ.
ಈಗಾಗಲೇ ರಾಜ್ಯಾದ್ಯಂತ ಸುಮಾರು 15000 ಖಾಸಗಿ ಬಸ್ಸುಗಳಿದ್ದು, ಈ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸುಮಾರು 2800 ಬಸ್ಸುಗಳಿವೆ. ಇದನ್ನೆ ನಂಬಿಕೊಂಡು 11200 ಕುಟುಂಬದ ಸದಸ್ಯರುಗಳು ನೇರವಾಗಿ ಮತ್ತು ಪರೋಕ್ಷವಾಗಿ ಬದುಕುತ್ತಿದ್ದಾರೆ. ಬಸ್ ಮಾಲಿಕರು ಕಾರ್ಮಿಕರಿಗೆ ಆರ್ಥಿಕ ಸಹಾಯ ಮಾಡಿದ್ದು ಬಿಟ್ಟರೆ, ಸರಕಾರ ಯಾವುದೇ ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ. ಕಳೆದ ವರ್ಷ ಲಾಕ್ಡೌನ್ ಆದಾಗ ಆರ್ಟಿಓ ಗೆ ಸರೆಂಡರ್ ಮಾಡಿದ ಬಸ್ಸುಗಳನ್ನು ಇನ್ನು ಹೊರಗೆ ಬಂದಿಲ್ಲ. ಇದರೊಂದಿಗೆ ಈ ಬಾರಿಯ ಲಾಕ್ಡೌನ್ ಗಾಯದ ಮೇಲೆ ಮತ್ತಷ್ಟು ಬರೆ ಎಳೆದಂತೆ ಆಗಿದೆ.
20%ಬಸ್ ದರ ಹೆಚ್ಚಾದರೆ ಮಾತ್ರ ಬಸ್ ಸಂಚಾರ ಸಾಧ್ಯ :
ಖಾಸಗಿ ಮತ್ತು ಸರಕಾರದ ಸಾರಿಗೆ ಬಸ್ ಗಳ ನಡುವೆ ಪೈಪೋಟಿ ಇದ್ದೇ ಇದೆ. ಕಳೆದ ಬಾರಿಯೂ ಲಾಕ್ ಡೌನ್ ಮುಗಿಯುತ್ತಿದ್ದಂತೆ ಖಾಸಗಿ ಬಸ್ ಗಳ ಸೇವೆ ನೀಡಿತ್ತು. ಆದರೆ ಈ ಬಾರಿ ಬಹಳಷ್ಟು ಕಷ್ಟದ ಪರಿಸ್ಥಿತಿ ಯನ್ನು ಎದುರಿಸುತ್ತಿದೆ. ಸರಕಾರಿ ಬಸ್ ಗಳು 50% ಸೀಟುಗಳನ್ನು ಭರಿಸಿದರೂ ನಡೆಯುತ್ತದೆ. ಆದರೆ ಖಾಸಗಿ ಬಸ್ ಗಳ ನಷ್ಟವನ್ನು ತುಂಬುವುದು ಯಾರು ? ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ೨೦% ರಷ್ಟು ಬಸ್ ದರ ಏರಿಕೆಯಾದರೆ ಮಾತ್ರ ಬಸ್ ನಿರ್ವಹಣೆ ಸಾದ್ಯ ಜನರಿಗೆ ಉತ್ತಮ ಸೇವೆ ನೀಡಬಹು ಎಂದು ಬಸ್ಸು ಮಾಲೀಕರು ಅಭಿಪ್ರಾಯಪಟ್ಟಿದ್ಡಾರೆ
ಬಸ್ ದರದ ರಿಯಾಯಿತಿಗಳು ರದ್ದಾಗಬಹುದೇ? :
ಈಗಾಗಲೇ ನಷ್ಟ ದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಗಳು ವಿದ್ಯಾರ್ಥಿಗಳಿಗೆ, ರೆಗ್ಯುಲರ್ ಪ್ಯಾಸೆಂಜರ್ಸ್ ಗಳಿಗೆ ನೀಡುತ್ತಿರುವ ಪಾಸ್ ಗಳು ರದ್ದಾಗುವ ಸಾಧ್ಯತೆ ಇದೆ.
"ಬಸ್ಗಳ ಸಂಚಾರಕ್ಕೆ ಕೋವಿಡ್ ಮಾರ್ಗಸೂಚಿ ಅಡ್ಡಿ ಪಡಿಸುತ್ತಿದೆ. ಶೇ 50ರಷ್ಟು ಸೀಟುಗಳನ್ನು ಭರ್ತಿ ಮಾಡಬೇಕು ಎಂಬ ಮಾರ್ಗಸೂಚಿಗೆ ಪಾಲನೆ ಮಾಡಿದರೆ ಖಾಸಗಿ ಬಸ್ ಮಾಲೀಕರಿಗೆ ನಷ್ಟವಾಗಲಿದೆ. ಡಿಸೇಲ್ ದರ ಈಗಾಗಲೇ ರೂ 92 ಕ್ಕೆ ಏರಿಕೆಯಾಗಿದ್ದು, ಸರಕಾರದ ಮಾರ್ಗಸೂಚಿ ಯಂತೆ ನಡೆದರೆ ಬಸ್ ಮಾಲಿಕರಿಗೆ ಇನ್ನಷ್ಟು ನಷ್ಟವಾಗುತ್ತದೆ. ಆದಕ್ಕಾಗಿ ಬಸ್ಗಳನ್ನು ಇನ್ನೂ ರಸ್ತೆಗೆ ಅಸಾಧ್ಯ. ಈಗಾಗಲೇ ಸಂಬಂಧ ಪಟ್ಟ ಇಲಾಖೆಗೆ 2 ವರ್ಷದ ಸಾಲದ ಬಡ್ಡಿ , ಆದಾಯ ತೆರಿಗೆ ರಸ್ತೆ ತೆರಿಗೆ ವಿನಾಯಿತಿ ಮಾಡುವಂತೆ ಅಲ್ಲದೆ ಇತರ ಸಮಸ್ಯೆಗಳ ಬಗ್ಗೆ ಮನವಿ ನೀಡಲಾಗಿದೆ. ನಮ್ಮ ಮನವಿಗೆ ಸರಕಾರ ಎಷ್ಟು ಬೇಗ ಸ್ಪಂದಿಸುತ್ತದೋ ಅಷ್ಟು ಬೇಗ ನಮ್ಮ ಸೇವೆ ಆರಂಭ ಮಾಡುತ್ತೇವೆ. ಸರಕಾರಿ ಸಾರಿಗೆಗೆ ಸರಕಾರದ ಅನುದಾನ ಬರುತ್ತದೆ. ಆದರೆ ಖಾಸಗಿ ಬಸ್ ಗಳಿಗೆ ಇಲ್ಲ. ಹಾಗಾಗಿ ಪ್ರತಿ ಖಾಸಗಿ ಬಸ್ ಗಳಿಗೆ 24ತಿಂಗಳು ರೂ 2 ಲಕ್ಷ ಬಡ್ಡಿ ರಹಿತ ಅವಕಾಶ ಕೊಡಬೇಕು ಎಂದು ಕೇಂದ್ರ ಸರಕಾರಕ್ಕೆ ನನ್ನ ಆಗ್ರಹವಿದೆ.ಹಿಂದೆ ನಮ್ಮ ಖಾಸಗಿ ಬಸ್ ಗಳಿಂದ ರಾಯಧನ ಪಾವತಿ ಆಗಿದೆ. ಜನರಿಗೆ ಅನುಕೂಲ ವಾಗುವಂತೆ ಪಾಸ್ ವ್ಯವಸ್ಥೆ ಕೊಡಿಸಿದ್ದೇವೆ ಅದಾವುದನ್ನೂ ನಮಗೆ ಸರಕಾರ ಬರಿಸುವುದು ಬೇಡ ಆದರೆ, ಮುಂದಿನ ಮೂರು ತಿಂಗಳ ಆದಾಯ ತೆರಿಗೆ ವಿನಾಯಿತಿ ಮಾಡಲಿ. ಬಸ್ ಉದ್ಯಮ ಈಗ ರಸ್ತೆ ಬಿಟ್ಟು ಹಳ್ಳ ಹಿಡಿದಿದೆ. ಇದನ್ನೇ ನಂಬಿಕೊಂಡ ಅದೆಷ್ಟೋ ಕುಟುಂಬಗಳ ಬದುಕು ದುಸ್ಥರವಾಗಿದೆ ಎಪ್ರಿಲ್ 2020 ರಿಂದ ಸಾರಿಗೆ ಇಲಾಖೆಗೆ ಶರಣಾದ 30% ಖಾಸಗಿ ಬಸ್ ಗಳು ಇನ್ನೂ ರಸ್ತೆಗೆ ಇಳಿದಿಲ್ಲ. ಇನ್ನೊಂದು ಬಹಳ ಸವಾಲು ಎಂದರೆ ಲಾಕ್ ಡೌನ್ ಆರಂಭವಾದ ನಂತರ 20% ರಷ್ಟು ಪ್ರಯಾಣಿಕರು ವೈಯಕ್ತಿಕ ವಾಹನದಲ್ಲಿ ತೆಗೆದುಕೊಂಡು ಸ್ವತಂತ್ರ ವಾಗಿ ಸಂಚರಿಸುತ್ತಿದ್ದಾರೆ. ಹಾಗಾಗಿ ಸರಾಸರಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದ್ದಾರೆ, ಎಂದು ಖಾಸಗಿ ಬಸ್ ಮಾಲೀಕರ ಸಂಘದ ಖಜಾಂಚಿ ಕುಯ್ಲಾಡಿ ಸುರೇಶ್ ನಾಯಕ್ ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ.
" ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಆರ್ ಟಿ ಓ ಸಾರ್ವಜನಿಕ ಸೇವೆಯನ್ನು ಸೋಮವಾರ ಜೂನ್ ೨೧ ಕಾರ್ಯಾರಂಭ ಮಾಡಲಿದೆ. ಕೆಲವು ಸೇವೆಗಳನ್ನು ಇ-ಪೋರ್ಟ್ ತಂತ್ರಾಂಶ ದಡಿ ಪಡೆಯಬಹುದಾಗಿದೆ.ಉಡುಪಿ ಜಿಲ್ಲೆಯಲ್ಲಿ ಜೂ. 11ರಿಂದ 18ರ ವರೆಗೆ 545 ಮಂದಿ ಖಾಸಗಿ ಪ್ರಯಾಣಿಕ ವಾಹನ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಆ ಮೂಲಕ ಬಸ್ ಚಾಲನೆ ಕರ್ತವ್ಯಕ್ಕೆ ಅರ್ಹತೆ ಪಡೆದಿದ್ದಾರೆ" , ಎಂದು ಆರ್.ಟಿ.ಓ ಜೆ. ಪಿ. ಗಂಗಾಧರ್ ತಿಳಿಸಿದ್ದಾರೆ..