Karavali
ಬಂಟ್ವಾಳ: 'ಸೇವ್ ದ ಚಿಲ್ಡ್ರನ್ ' - 5000 ಮಕ್ಕಳನ್ನು ತಲುಪಿದ ಕಲಿಕೆಯ ವಾಟ್ಸಾಪ್ ಗುಂಪು
- Sat, Jun 19 2021 10:22:40 AM
-
ಮೌನೇಶ ವಿಶ್ವಕರ್ಮ
ಬಂಟ್ವಾಳ, ಜೂ 19(DaijiworldNews/MS): ಕೊರೋನಾ ಒಂದನೇ ಅಲೆ, ಎರಡನೇ ಅಲೆಯಿಂದಾಗಿ ತ್ರಿಶಂಕು ಸ್ಥಿತಿಯಲ್ಲಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ, ಶಿಕ್ಷಣ ಇಲಾಖೆ ಶತಾಯಗತಾಯ ಪ್ರಯತ್ನವನ್ನೂ ನಡೆಸುತ್ತಿದೆ. ಇದರ ಫಲವಾಗಿ ಮೂರನೇ ಅಲೆಯ ಭೀತಿಯ ನಡುವೆಯೂ ಹುಂಬ ಧೈರ್ಯ ದೊಂದಿಗೆ 2021-22 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಲು ಮುಂದಾಗಿದೆ. ಆ ಮೂಲಕ ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಒಳಪಟ್ಟ ವಯಸ್ಸಿನ ಮಕ್ಕಳ ಶೈಕ್ಷಣಿಕ ನಿರಂತರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನೂ ಇರಿಸಿದೆ.
ಆದರೆ ಅಂಗನವಾಡಿ , ಎಲ್ಕೆಜಿ, ಯುಕೆಜಿ ಸೇರಬೇಕಿದ್ದ 3ರಿಂದ 6 ವಯಸ್ಸಿನ ಪುಟಾಣಿಗಳು ಚಟುವಟಿಕೆಗಳಿಲ್ಲದೆ ಆರಂಭಿಕ ಕಲಿಕೆಯ ನ್ಯೂನತೆಯನ್ನು ಎದುರಿಸುತ್ತಿದ್ದಾರೆ. ಈ ವಯೋಮಾನದ ಮಕ್ಕಳ ಹಿತದೃಷ್ಟಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಾಗದಂತೆ ಅಂಗನವಾಡಿ ಕೇಂದ್ರಗಳ ಮುಖೇನ ಕ್ರಮಕೈಗೊಳ್ಳುತ್ತಿದೆ. ಆದರೆ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಕಲಿಕೆಯ ಆರಂಭಿಕ ಹಂತದ ಚಟುವಟಿಕೆಗಳಿಲ್ಲದೆ ದಿನಕಳೆಯುವಂತಾಗಿದೆ. ಕೊರೋನಾ ಸೃಷ್ಟಿಸಿದ ಈ ಸನ್ನಿವೇಶ ದಿಂದ ಪೋಷಕರೂ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ.ಆಶಾಕಿರಣ ವಾದ "ಸೇವ್ ದ ಚಿಲ್ಡ್ರನ್" ಸಂಸ್ಥೆ
ಕೊರೋನಾ ದಿಂದ ಅಂಗನವಾಡಿ ಕೇಂದ್ರಗಳ ಸಹಿತ ಪೂರ್ವಪ್ರಾಥಮಿಕ ಶಾಲೆಗಳೂ ಮುಚ್ಛಲ್ಪಟ್ಟಿರುವ ಹಿನ್ನೆಲೆಯಲ್ಲಿ ಮಕ್ಕಳ ಕುರಿತಾಗಿ ಕಾಳಜಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲಾಖೆಯ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ
ಸೇವ್ ದಿ ಚಿಲ್ಡ್ರನ್ ಸಂಸ್ಥೆ ಪ್ರಯೋಗಾತ್ಮಕವಾಗಿ ನಡೆಸುತ್ತಿರುವ ಬೆಂಗಳೂರು ಆಕಾಶವಾಣಿಯ ಸಹಯೋಗದ ಹಾಡು ಮಾತಾಡು ಕಾರ್ಯಕ್ರಮದ ಮುಖೇನ ವಾಟ್ಸಾಪ್ ಗುಂಪುಗಳ ಮುಖೇನ ಮಕ್ಕಳಲ್ಲಿ ಹೊಸಲವಲವಿಕೆ ಉಂಟುಮಾಡುತ್ತಿದೆ.ಏನಿದು ವಾಟ್ಸಾಪ್ ಗುಂಪು ?
ಸಂಸ್ಥೆ ತನ್ನ ಕಾರ್ಯಕ್ಷೇತ್ರವಾದ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರಲ್ಲದೆ ರಾಜ್ಯವ್ಯಾಪಿ ಸುಮಾರು 5000 ಮಕ್ಕಳನ್ನು ತಲುಪಿದ್ದಾರೆ. ಮಾತ್ರವಲ್ಲದೆ,ಬೆಂಗಳೂರು ಆಕಾಶವಾಣಿಯ ಸಹಯೋಗದಲ್ಲಿ ನಡೆಸಿರುವ “ಹಾಡು ಮಾತಾಡು” ಎಂಬ ಕಾರ್ಯಕ್ರಮದ ಮುಖೇನ ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದು, ಸಾವಿರಕ್ಕೂ ಅಧಿಕ ಮಕ್ಕಳಿಗೆ ಪ್ರಯೋಜನಕಾರಿಯಾಗುತ್ತಿದೆ. 3ರಿಂದ 6 ವರ್ಷದೊಳಗಿನ ಮಕ್ಕಳ ಹೆತ್ತವರನ್ನು ಈ ವಾಟ್ಸಾಪ್ ಗುಂಪುಗಳಿಗೆ ಸೇರ್ಪಡೆಗೊಳಿಸಲಾಗಿದ್ದು, ಸಂಸ್ಥೆಯ ವತಿಯಿಂದ ವಾರದ 5 ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ವಿಡಿಯೋ-ಆಡಿಯೋ ಚಟುವಟಿಕೆಯನ್ನು ನೀಡಲಾಗುತ್ತದೆ.
7 ವಾಟ್ಸಾಪ್ ಗುಂಪುಗಳಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು
ಹಾಡು ಮಾತಾಡು ಕಾರ್ಯಕ್ರಮದ ಮೂಲಕ ರಚಿಸಲಾದ 7 ವಾಟ್ಸಾಪ್ ಗುಂಪುಗಳಲ್ಲಿ ರಾಜ್ಯದ ವಿವಿಧೆಡೆಗಳ ಸಾವಿರಕ್ಕೂ ಅಧಿಕ ಪೋಷಕರಿದ್ದಾರೆ. ಕೊರೋನಾ ಸಂಕಷ್ಟದ ಈ ಹೊತ್ತು ನಮ್ಮ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಸಿಗುತ್ತಿಲ್ಲವಲ್ಲಾ ಎಂಬ ಕೆಲ ಪೋಷಕರ ಆತಂಕ "ಸೇವ್ ದ ಚಿಲ್ಡ್ರನ್" ಸಂಸ್ಥೆಯ ಈ ಕಾರ್ಯಕ್ರಮದ ಮೂಲಕ ದೂರವಾಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎನ್ನುವುದನ್ನು ಪೋಷಕರಿಗೆ ಮಗದೊಮ್ಮೆ ಮನದಟ್ಟು ಮಾಡುವುದರ ಜೊತೆಗೆ ಹೆತ್ತವರು ಮಕ್ಕಳಿಗೆ ಮಾಡಿಸಬಹುದಾದ ಚಟುವಟಿಕೆಗಳನ್ನು ಸಂಸ್ಥೆ ಪರಿಚಯಿಸುತ್ತಿರುವುದು ಪುಟಾಣಿ ಮಕ್ಕಳಲ್ಲಿ ಗೆಲುವು ಹುರುಪು ತುಂಬಲು ಕಾರಣವಾಗುತ್ತಿದೆ.ಏನೇನು ಚಟುವಟಿಕೆ ?
ಮನೆಯಲ್ಲಿ ದೊರಕುವ ತರಕಾರಿ, ಹಣ್ಣುಗಳು, ಅಡುಗೆ ಕೋಣೆಯ ಸಲಕರಣೆಗಳು, ಪುಸ್ತಕ ಗಳು, ಮರಗಿಡಗಳನ್ನು ಬಳಸಿ ಸಂಖ್ಯೆಗಳ ಪರಿಚಯ, ಅಕ್ಕಿ, ಗೋಧಿ ಹುಡಿಯಲ್ಲಿ ಅಕ್ಷರಾಭ್ಯಾಸ, ಗೊಂಬೆಗಳ ಮೂಲಕ ಶಿಶುಗೀತೆ, ಹಾಡು, ಕತೆಗಳ ಮೂಲಕ ಮಕ್ಕಳ ಭಾಷಾಬೆಳವಣಿಗೆ,ಅಭಿನಯ ಚಾತುರ್ಯ ದ ಚಟುವಟಿಕೆಗಳನ್ನು ನೀಡಲಾಗುತ್ತದೆ.ಜೊತೆಗೆ ಚಟುವಟಿಕೆ ನಡೆಸುವುದರಿಂದ ಮಕ್ಕಳಲ್ಲಿ ಆಗಬಹುದಾದ ದೈಹಿಕ, ಮಾನಸಿಕ ವಿಕಸನದ ಬಗ್ಗೆಯೂ ತಿಳಿಸಲಾಗುತ್ತದೆ.
ಇದಕ್ಕಾಗಿ ವೇಳಾಪಟ್ಟಿಯನ್ನೂ ತಯಾರಿಸಲಾಗಿದ್ದು, ಸೋಮವಾರ ದಿನ ಮಕ್ಕಳ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳು, ಮಂಗಳವಾರ ಕಥೆ ಹೇಳುವ ಚಟುವಟಿಕೆ.ಬುಧವಾರ ದೈಹಿಕ ಚಟುವಟಿಕೆ. ಗುರುವಾರ ಆರಂಭಿಕ ಸಂಖ್ಯಾಶಾಸ್ತ್ರದ ಕುರಿತಾದ ಚಟುವಟಿಕೆ , ಶುಕ್ರವಾರ ಮಕ್ಕಳ ಕಲಿಕೆ ಕುರಿತಾದ ಚಟುವಟಿಕೆಗಳನ್ನು ನೀಡಿದರೆ ಶನಿವಾರ ಪೋಷಕರನ್ನು ಸಂಪರ್ಕಿಸುತ್ತಾರೆ.ಮಕ್ಕಳ ವಿಕಾಸಕ್ಕೆಂದೇ ಸ್ಥಾಪಿತವಾಗಿರುವ ಸರ್ಕಾರಿ ಪ್ರಾಯೋಜಿತ ರಾಜ್ಯ ಬಾಲಭವನ ಸೊಸೈಟಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸೇವ್ ದ ಚಿಲ್ಡ್ರನ್ ಸಂಸ್ಥೆಯ ಈ ಕಾರ್ಯಯೋಜನೆಯನ್ನು ರಾಜ್ಯವ್ಯಾಪಿ ವಿಸ್ತಾರಗೊಳಿಸಿದರೆ, ಸಂಸ್ಥೆಯ ಪ್ರಯತ್ನಕ್ಕೆ ಮತ್ತಷ್ಟು ಯಶಸ್ಸು ಸಿಗಲು ಸಾಧ್ಯ.
ಗುಲ್ ಮೊಹರ್ ಕರಿಕ್ಯುಲಮ್ ನ ಆಧಾರದಲ್ಲಿ ಮಕ್ಕಳ ಕಥೆಗಳು, ರೈಮ್ಸ್ ಗಳ ವೀಡಿಯೋ ಗಳನ್ನು ವಿಷಯಪರಿಣತರ ಸಹಾಯದಿಂದ ಸಿದ್ಧಪಡಿಸಲಾಗಿದೆ. ಪ್ರಾಜೆಕ್ಟ್ ಏರಿಯಾ ಬೆಂಗಳೂರುಸಿಟಿ, ಬೆಂಗಳೂರು ಗ್ರಾಮಾಂತರ ಸೇರಿದಂತೆ , ಕಳೆದ ಜುಲೈನಿಂದ ಬೆಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ಬಳಿಕ ಸಾವಿರಾರು ಮಕ್ಕಳನ್ನು ತಲುಪಿದ್ದೇವೆ, ಇಡೀ ಕರ್ನಾಟಕಕ್ಕೆ ಈ ಯೋಜನೆ ವಿಸ್ತಾರಗೊಳಿಸಬೇಕು ಎಂಬ ಬೇಡಿಕೆ ಇದೆ. - ವಿ.ಲಿಸ್ಸಿ ಯೋಜನಾ ಸಂಯೋಜಕರು (ಶಿಕ್ಷಣ) ಸೇವ್ ದ ಚಿಲ್ಡ್ರನ್ ಸಂಸ್ಥೆ, ಬೆಂಗಳೂರು-ಕರ್ನಾಟಕ
-
ಹಾಡು ಮಾತಾಡು ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಬಳಿಕ ಮಗಳು ಶಾರ್ವರಿಯಲ್ಲಿ ಬಹಳಷ್ಟು ಪ್ರಗತಿಯನ್ನು ಕಂಡಿದ್ದೇವೆ. ದಿನಬೆಳಗಾದರೆ ವಾಟ್ಸಾಪ್ ನಲ್ಲಿ ಬರುವ ಚಟುವಟಿಕೆಯ ಬಗ್ಗೆ ಇವಳಲ್ಲಿ ಕುತೂಹಲ ಹೆಚ್ಚುತ್ತಿದೆ.ಕಥೆ ಕೇಳುವ,ಕಥೆ ಹೇಳುವ ಆಸಕ್ತಿ ಹೆಚ್ಚಾಗಿದೆ. ಈ ಚಟುವಟಿಕೆ ರಾಜ್ಯವ್ಯಾಪಿ ವಿಸ್ತಾರಗೊಳ್ಳಬೇಕು. -ರಾಜೇಶ್ವರಿ ಮಹೇಶ್ ನಾಯಕ್ ಕುಮಟಾ (ಶಾರ್ವರಿ ತಾಯಿ)ನಮ್ಮ ಮಗ ವೀರೇಶ್ 6 ತಿಂಗಳು ಪ್ಲೇ ಸ್ಕೂಲ್ ಹೋಗಿದ್ದಾನೆ, ಲಾಕ್ ಡೌನ್ ಆದ್ಮೇಲೆ ಸ್ಕೂಲ್ ಬಂದ್ ಆಗಿ, ಬಹಳ ಕಷ್ಟ ಆಗ್ತಿತ್ತು, ಸೇವ್ ದ ಚಿಲ್ಡ್ರನ್ ನವರು ನಡೆಸುವ ಚಟುವಟಿಕೆಯಿಂದ ಮತ್ತೆ ಹೆಚ್ಚು ಹೆಚ್ಚು ಕಲಿಕೆಯತ್ತ ಮುಖಮಾಡಿದ್ದಾನೆ. ಇದು ನಮಗೂ ಖುಷಿಕೊಟ್ಟಿದೆ -ಜ್ಯೋತಿ ದಾವಣಗೆರೆ (ವೀರೇಶ್ ತಾಯಿ)