ಉಡುಪಿ, ಜೂ. 18 (DaijiworldNews/HR): ಕೃಷಿ ಜೀವ ಮತ್ತು ಜೀವನದ ಆಧಾರ ಸ್ಥಂಭವಾಗಿದೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಈ ಕುರಿತು ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 50 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದ್ದು, ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವೇರಿಜಿಡ್ಡ ಸಾಧು ಪೂಜಾರಿ ಮನೆ ಬಳಿ 20 ಎಕರೆ ಹಡಿಲು ಭೂಮಿ ಕೃಷಿಯ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಭಾರತ ಹಳ್ಳಿಗಳ ದೇಶವಾಗಿದ್ದು ಇಲ್ಲಿ ಕೃಷಿಯೇ ಮೂಲ ವೃತ್ತಿಯಾಗಿದ್ದು ರೈತನೇ ದೇಶದ ಬೆನ್ನೆಲುಬು ಎನ್ನುವುದನ್ನು ನಾವು ನಂಬಿಕೊಂಡು ಬಂದಿದ್ದೇವೆ. ಇಂದು ಉಡುಪಿ ಶಾಸಕ ರಘುಪತಿ ಭಟ್ ಟ್ರಸ್ಟ್ ಮೂಲಕ ಮಾಡುತ್ತಿರುವ ಹಡಿಲು ಭೂಮಿ ಕೃಷಿ ಕಾರ್ಯಕ್ರಮ ಪವಿತ್ರವಾದ ಕೆಲಸವಾಗಿದೆ. ಕೃಷಿಗೂ ನಮಗೂ ಹತ್ತಿರದ ಸಂಬಂಧವಿದೆ. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಭತ್ತದ ಕಣಜ ಎಂದು ಕರೆದರೆ ಎರಡನೇ ಸ್ಥಾನ ಕೃಷಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಿದೆ" ಎಂದರು.
"ಹಡಿಲು ಭೂಮಿಯನ್ನು ಹದ ಮಾಡಿ ವ್ಯವಸಾಯಕ್ಕೆ ಅಣಿ ಮಾಡಿರುವುದು ಶ್ಲಾಘನೀಯ ಈ ಮೂಲಕ ಕೃಷಿಯಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಲು ಶಾಸಕ ರಘುಪತಿ ಭಟ್ ಹೊರಟಿದ್ದಾರೆ. ಈ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಇರುವವರಿಗೆ ಕೃಷಿಯ ಮೂಲಕ ಕನಿಷ್ಠ ಊಟಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕೃಷಿಯ ಮೂಲಕ ಅನುದಿನದ ಆಹಾರ ಭೂತಾಯಿ ನೀಡಿದರೆ ನಮ್ಮ ಜೀವನ ಸಾರ್ಥಕ ಎನ್ನಬಹುದು. ಇಲ್ಲಿ ಬೆಳೆಯುವ ಭತ್ತಕ್ಕೆ ಯಾವುದೇ ರಾಸಾಯನಿಕ ಉಪಯೋಗಿಸದೆ ಸಾವಯವ ಗೊಬ್ಬರ ಉಪಯೋಗಿಸುವುದರಿಂದ ಸಾವಯವ ಕೃಷಿ ಆರೋಗ್ಯಕ್ಕೆ ಉತ್ತಮವಾಗುತ್ತದೆ. ಹಡಿಲು ಭೂಮಿಯನ್ನು ಕೃಷಿಗೆ ಉಪಯೋಗಿಸುವುದರಿಂದ ಸುಮಾರು 1500 ಎಕ್ರೆ ಗದ್ದೆಗಳಲ್ಲಿ ಮುಂದಿನ 4 ತಿಂಗಳು ಸಂಪೂರ್ಣ ಗದ್ದೆಯಲ್ಲಿ ಸಂಪೂರ್ಣ ನೀರು ನಿಲ್ಲಲಿದೆ ಈ ಮೂಲಕ ಭೂಮಿಯಲ್ಲಿ ಅಂತರ್ಜಲದ ಮಟ್ಟ ಏರಿಕೆಯಾಗಲು ಸಹಕಾರಿಯಾಗುತ್ತದೆ ಇಂತಹ ಉತ್ತಮ ಕಾರ್ಯಕ್ಕೆ ಕೈ ಹಾಕಿರುವ ಶಾಸಕರ ಕಾರ್ಯ ಶ್ಲಾಘನೀಯ. ಉಡುಪಿ ಧರ್ಮಪ್ರಾಂತ್ಯ ಕೂಡ ಕಳೆದ ಹಲವು ವರ್ಷಗಳಿಂದ ಹಡಿಲು ಭೂಮಿಯಲ್ಲಿ ಕೃಷಿಯನ್ನು ಮಾಡಲು ಯುವಕರಿಗೆ ಉತ್ತೇಜನ ನೀಡಿಕೊಂಡು ಬಂದಿದ್ದು ಇದರಲ್ಲಿ ಉತ್ತಮ ಯಶಸ್ಸು ಕಂಡಿದ್ದೇವೆ" ಎಂದು ಹೇಳಿದ್ದಾರೆ.
ಈ ವೇಳೆ ಕಲ್ಯಾಣಪುರ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪದ್ಮನಾಭ ಕಿಣಿ, ಮೌಂಟ್ ರೋಸರಿ ಚರ್ಚ್ ಧರ್ಮಗುರುಗಳಾದ ವಂ. ಲೆಸ್ಲಿ ಡಿಸೋಜಾ, ಮಿಲಾಗ್ರಿಸ್ ಕೆಥೆಡ್ರಲ್ ರೆಕ್ಟರ್ ವಂ. ವಲೇರಿಯನ್ ಮೆಂಡೋನ್ಸಾ, ಧರ್ಮಪ್ರಾಂತ್ಯದ ವಂ. ರೋಮಿಯೋ ಲೂಯಿಸ್, ಉಡುಪಿ ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಜೆರ್ರಿ ವಿನ್ಸೆಂಟ್ ಡಯಾಸ್, ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಉಪಾಧ್ಯಕ್ಷರಾದ ಉದಯ್ ಪೂಜಾರಿ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸದಸ್ಯರಾದ ದಿನಕರ್ ಬಾಬು, ಸ್ಥಳೀಯರಾದ ಸಾಧು ಪೂಜಾರಿ, ಕಲ್ಯಾಣಪುರ ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಯೋಗಿತಾ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಕೃಷಿಕರು, ಪ್ರಮುಖರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.