ಉಡುಪಿ, ಜೂ 18 (DaijiworldNews/PY): "ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿದ ಅವರು, "ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 6 ರಿಂದ ಮದ್ಯಾಹ್ನ 2 ಗಂಟೆಯವರೆಗೆ ತರಕಾರಿ, ದಿನಸಿ ಸಾಮಾಗ್ರಿ ಅಂಗಡಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಅಗತ್ಯ ಸೇವೆಗೆಳಿಗೆ ಮಾತ್ರ ಕಾರ್ಯನಿರ್ವಹಿಸುವ ಅವಕಾಶನೀಡಲಾಗಿದೆ. ವೀಕೆಂಡ್ ಕರ್ಫ್ಯೂನಲ್ಲಿ ಅನಗತ್ಯ ಸಂಚಾರ ಮಾಡುವಂತೆ ಇಲ್ಲ. ಅಗತ್ಯ ಸೇವೆಗಾಗಿ ಮಾತ್ರ ಹೊರಬರಲು ಅವಕಾಶ" ಎಂದಿದ್ದಾರೆ.
"ಮದ್ಯ ಖರೀದಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದೆ. ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರವೇ ಅವಕಾಶ. ಅಗತ್ಯ ವಸ್ತುಗಳ ಸರಬರಾಜಿಗೆ ವಾಹನಗಳ ಸಂಚಾರ ನಡೆಸಬಹುದು. ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದೆ. ರೋಗಿ ಹಾಗೂ ಅವರ ಪರಿಚಾರಕರಿಗೆ, ದೂರವಾಣಿ ಸೇವೆ ಇಂಟರ್ನೆಟ್ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
"ಪೂರ್ವ ನಿಗದಿ ವಿವಾಹಗಳಿಗೆ ಅವಕಾಶ ಇದೆ. ಶವ ಸಂಸ್ಕಾರಕ್ಕೆ ಕೇವಲ ಐದು ಮಂದಿಗೆ ಮಾತ್ರವೇ ಅವಕಾಶ. ಉಳಿದಂತೆ ಎಲ್ಲಾ ಕೈಗಾರಿಕೆ, ಫ್ಯಾಕ್ಟರಿಗಳು ಎರಡು ದಿನಗಳ ಕಾಲ ಬಂದ್ ಆಗಲಿವೆ. ವೀಕೆಂಡ್ ಕರ್ಫ್ಯೂ ಸಂದರ್ಭ ಕಠಿಣ ತಪಾಸಣೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಚೆಕ್ ಪೋಸ್ಟ್ನಲ್ಲಿ ಕಠಿಣ ತಪಾಸಣೆ ನಡೆಸುವ ಸಾಧ್ಯತೆ ಇದೆ. ಉಡುಪಿ ನಗರದ ಎಂಟ್ರಿ ಪಾಯಿಂಟ್ಗಳಲ್ಲಿ ಕಠಿಣ ತಪಾಸಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಮಂದಿ ನಗರಕ್ಕೆ ಧಾವಿಸಿದ್ದು, ಜನಸಂಚಾರ ಹೆಚ್ಚಾಗಿತ್ತು. ಇಂದು ಬೆಳಗ್ಗಿನಿಂದಲೇ ಉಡುಪಿಯಲ್ಲಿ ತೀವ್ರ ಗತಿಯಲ್ಲಿ ಜನಸಂಚಾರ ಹೆಚ್ಚಾಗಿದ್ದು, ವಾಹನ ಸಂಚಾರವು ಹೆಚ್ಚಾಗಿತ್ತು.