ಉಡುಪಿ, ಜೂ. 17 (DaijiworldNews/SM): ತೌಕ್ತೆ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳಿಗೆ ಗುರುವಾರದಂದು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದೆ. ಬೈಂದೂರು, ಶಿರೂರು, ಉಪ್ಪುಂದ, ಮರವಂತೆ, ಕಾಪು ಪಡುಬಿದ್ರಿ ಮುಂತಾದ ಪ್ರದೇಶಗಳಲ್ಲಿ ಹಾನಿಗೊಳಗಾದ ಸಮುದ್ರ ತೀರ, ಕೃಷಿ ಭೂಮಿ, ಬಿದ್ದ ಮನೆಗಳ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿದರು.
ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಸುಮಾರು 175-28 ಕೋಟಿ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ 2 ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಒಟ್ಟು 5 ಜನರ ತಂಡ ಜಿಲ್ಲೆಯಾದ್ಯಾಂತ ವಿವಿಧ ಕಡೆ ವೀಕ್ಷಣೆ ಮಾಡಿ ನಷ್ಟದ ಮಾಹಿತಿ ಸಂಗ್ರಹಿಸಿದರು. ಉಡುಪಿ ಜಿಲ್ಲೆಗೆ ವೀಕ್ಷಣೆಗೆ ಆಗಮಿಸಿದ ಕೇಂದ್ರ ವಿಪತ್ತು ನಿರ್ವಹಣಾ ಆಯುಕ್ತ ಡಾ. ಮನೋಜ್ ಅವರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಆಯುಕ್ತ ಕೆ. ರಾಜು, ಬೈಂದೂರು ತಹಸೀಲ್ದಾರ ಶೋಭಾಲಕ್ಷ್ಮೀ ಮುಂತಾದವವರು ಹಾಜರಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಡಾ. ಮನೋಜ್ ಒಟ್ಟು 2 ಜಿಲ್ಲೆಗಳಲ್ಲಿ 2 ದಿನಗಳ ಕಾಲ ವಿವಿಧ ಇಲಾಖೆಗಳ 5 ತಂಡ ಭೇಟಿ ನೀಡಿದ್ದು ಇಲಾಖಾವಾರು ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದ್ದೇವೆ. ಕೇಂದ್ರದ ತಂಡ ಅಧ್ಯಯನ ನಡೆಸಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಿದೆ ಎಂದರು.
ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಚಂಡಮಾರುತದಿಂದ ಹಾನಿಯಾದ ನಮ್ಮ ಜಿಲ್ಲೆಗೆ ಕೇಂದ್ರ ತಂಡ ಭೇಟಿ ನೀಡಿದೆ. ಕೇಂದ್ರದ ಅಧ್ಯಯನ ತಂಡಕ್ಕೆ ನಷ್ಟದ ಅಂದಾಜಿನ ಕುರಿತು ಮಾಹಿತಿ ನೀಡಲಾಗಿದ್ದು ಕೇಂದ್ರದ ನೆರವು ಆಧರಿಸಿ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಮಾಡಲಿದ್ದೇವೆ ಎಂದರು.