ಮಂಗಳೂರು, ಜೂ. 17 (DaijiworldNews/SM): ದೇಶದ ಇತಿಹಾಸದಲ್ಲಿ ಕೇಂದ್ರ ಸರಕಾರ ಹೊಸ ಸಾಧನೆ ಮಾಡಿದ್ದು, ತೈಲ ಬೆಲೆ ಏರಿಕೆ ಮಾಡಿ ಖಜಾನೆ ತುಂಬುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪೆಟ್ರೋಲ್ ಪಂಪ್ ತೆರಿಗೆ ಸಂಗ್ರಹಿಸುವ ಕೇಂದ್ರವಾಗಿದೆ. ಪ್ರಸ್ತುತ ಜನರ ದುಡಿಮೆ ಪೆಟ್ರೋಲ್, ಡೀಸೆಲ್ ಗಾಗಿ ಖರ್ಚಾಗುತ್ತಿದೆ. ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರ ಮೇಲೆ ಹೊರೆ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯುಪಿಎ ಸರಕಾರ ಇದ್ದಾಗ ತೈಲ ಬೆಲೆ ಕಡಿಮೆ ಇತ್ತು. ಪ್ರಸ್ತುತ 31.86 ಪೈಸೆ ತೆರಿಗೆ ಇದೆ. ಟ್ಯಾಕ್ಸ್ ಹಾಕುವ ಮೂಲಕ ಲೂಟಿ ಮಾಡಲಾಗುತ್ತಿದೆ. ಜನರು ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ತೆರಿಗೆ ಸಂಗ್ರಹಿಸುತ್ತಿದ್ದಾರೆಯೇ ಹೊರತು ಅಭಿವೃದ್ಧಿಯಾಗುತ್ತಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡಲಾಗುತ್ತಿದೆ. ಸಮಸ್ಯೆಯಾದಾಗ ಜನರಿಗೆ ಹೊರೆಯಾಗದಂತೆ ಸರಕಾರ ನೋಡಿಕೊಳ್ಳಬೇಕೆಂದು ಖಾದರ್ ತಿಳಿಸಿದ್ದಾರೆ.
ಜನರು ದಂಗೆ ಏಳುವ ಮುಂಚೆ ಸರಕಾರ ಎಚ್ಚೆತ್ತುಕೊಳ್ಳಬೇಕು. ಬೆಲೆ ಏರಿಕೆಯನ್ನು ಸಮರ್ಥನೆ ಮಾಡುವವರು ಯೋಚನೆ ಮಾಡಬೇಕು. ಮೀನುಗಾರರು ಸ್ವಾಭಿಮಾನ, ನಿಯತ್ತಿನಿಂದ ದುಡಿಯುತ್ತಿದ್ದಾರೆ. ಮೀನುಗಾರರಿಗೆ ಸರಿಯಾದ ಸಮಯದಲ್ಲಿ ಸಬ್ಸಿಡಿ ನೀಡಿಲ್ಲ. ಮೀನುಗಾರರಿಗೆ ಅನ್ಯಾಯ ಮಾಡಿದವರು ಕ್ಷಮೆ ಕೇಳಬೇಕು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.