ಕಾರ್ಕಳ, ಜೂ.17 (DaijiworldNews/HR): ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ಪ್ರದೇಶದ ಸಮಸ್ಯೆಯಿಂದಾಗಿ ಹಲವಾರು ಸಾರ್ವಜನಿಕ ಉದ್ದೇಶದ ಸರಕಾರದ ಯೋಜನೆಗಳಿಗೆ ಸೇರಿದಂತೆ ನಮೂನೆ-53ರಲ್ಲಿ ಅಕ್ರಮ ಸಕ್ರಮ ಜಮೀನು ಮಂಜೂರಾತಿ ಕೋರಿ ಮದ್ಯಮ ವರ್ಗದ ಭೂರಹಿತ ಕೃಷಿಕರಿಗೆ ಜಮೀನು ಮಂಜೂರು ಮಾಡುವರೇ ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದು ನಮೂನೆ 94ಸಿ ಮತ್ತು 94 ಸಿಸಿ ಯಡಿ ಹಕ್ಕುಪತ್ರ ಕೋರಿರುವ ಅಸಂಖ್ಯಾತ ಅರ್ಜಿಗಳು ಬಾಕಿ ಉಳಿದಿರುತ್ತವೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು ಈ ಸಮಸ್ಯೆಯನ್ನು ಪರಿಹರಿಸುವಂತೆ ಈಗಾಗಲೇ ಸರಕಾರದ ಮಟ್ಟದಲ್ಲಿ ಹಲವಾರು ಬಾರಿ ಚರ್ಚೆಗಳು ಆಗಿದ್ದು ಇವತ್ತು ರಾಜ್ಯ ಸರಕಾರದ ಮಾನ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಯವರನ್ನು ಬೇಟಿಯಾಗಿ ಈ ಸಮಸ್ಯೆ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.
1997ನೇ ಇಸವಿಯಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಸರಕಾರವು ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೇ ಮತ್ತು ಸಮಗ್ರ ಸ್ಥಳ ತನಿಖೆ ನಡೆಸದೆ ಕೇವಲ ಅಧಿಕಾರಿಗಳನ್ನು ಒಳಗೊಂಡ ಪರಿಣಿತ ತಜ್ಞರ ಸಮಿತಿಯನ್ನು ರಚಿಸಿ ತರಾತುರಿಯಲ್ಲಿ ಡೀಮ್ಡ್ ಪಟ್ಟಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದಲೇ ಈ ಡೀಮ್ಟ್ ಅರಣ್ಯ ಸಮಸ್ಯೆ ಪ್ರಾರಂಭ ಆಗಿರುತ್ತದೆ ಎಂದು ತಿಳಿಸಿದರು.
ಇನ್ನು ಆ ಬಳಿಕ ಅಧಿಕಾರಿಗಳ ತಜ್ಞರ ಸಮಿತಿ ಕೊಟ್ಟಿರುವ ವರದಿಯಲ್ಲಿ ಹಾಲಿ ಕಾರ್ಯಚರಿಸುತ್ತಿದ್ದಂತಹ ಸರಕಾರಿ ಕಟ್ಟಡ, ರಸ್ತೆ ಮತ್ತು ಭೂ ರಹಿತ ಕಾರ್ಮಿಕರು ಕೃಷಿಗೆ ಉಪಯೋಗಿಸುತ್ತಿದ್ದಂತಹ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದಂತಹ ಎಲ್ಲಾ ಸರಕಾರಿ ಜಾಗಗಳನ್ನು ಸಹ ಡೀಮ್ಡ್ ಎಂಬುವುದಾಗಿ ಪರಿಗಣಿಸಿ ಗೊಂದಲ ಸೃಷ್ಟಿಯಾಗಿರುವುದನ್ನು ನಾನು ಈಗಾಗಲೇ ರಾಜ್ಯ ಸರಕಾರದ ಗಮನಕ್ಕೆ ತಂದಿರುತ್ತಾರೆ. ಅಧಿಕಾರಿಗಳನ್ನೊಳಗೊಂಡ ಪರಿಣಿತ ತಜ್ಞರ 1ನೇ ಸಮಿತಿಯು ಅಂದಾಜು ರಾಜ್ಯದಲ್ಲಿ 9,90,000 ಹೆಕ್ಟೇರ್ ಡೀಮ್ಡ್ ಭೂಮಿ ಎಂದು ಗುರುತಿಸಿ ವರದಿ ನೀಡಿರುತ್ತದೆ.
ಕಳೆದ ಐದಾರು ವರ್ಷಗಳಿಂಂದ ಡೀಮ್ಡ್ ಅರಣ್ಯ ಸಮಸ್ಯೆ ಬಗ್ಗೆ ನಾನು ವಿಧಾನಸಭೆಯಲ್ಲಿ ಹಾಗೂ ಸರಕಾರದ ಮಟ್ಟದಲ್ಲಿ ಹಲವಾರು ಬಾರಿ ಸರಕಾರದ ಗಮನ ಸೆಳೆದಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೆಲವು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿ ಡೀಮ್ಡ್ ಫಾರೆಸ್ಟ್ ಗುರುತಿಸುವ ಬಗ್ಗೆ ತಾಲೂಕು / ಜಿಲ್ಲಾ / ರಾಜ್ಯ ಮಟ್ಟದಲ್ಲಿ ಕಮಿಟಿಯನ್ನು ರಚಿಸಿ ನಿರ್ದಿಷ್ಟ ಮಾನದಂಡಗಳ ಪ್ರಕಾರ ಅರಣ್ಯ ಲಕ್ಷಣಗಳನ್ನು ಹೊಂದಿರುವ ಜಾಗಗಳನ್ನು ಗುರುತುಮಾಡಿರುತ್ತದೆ. ಅದರ ಅನ್ವಯ ಮೊದಲನೇ ಪಟ್ಟಿಯಲ್ಲಿರುವ 9,90,000 ಹೆಕ್ಟೇರ್ ಬದಲಾಗಿ 3,30,000 ಹೆಕ್ಟೇರ್ ಡೀಮ್ಡ್ ಎಂಬುವುದಾಗಿ ಜಂಟಿ ಸ್ಥಳ ತನಿಖೆಯಿಂದ ಗುರುತಿಸಿದ್ದು ಈ ಹಿನ್ನೆಲೆಯಲ್ಲಿ ಎರಡನೇ ವರದಿಯನ್ನು ರಾಜ್ಯ ಸರಕಾರದ ಮುಖಾಂತರ ಸರ್ವೋಚ್ಚ ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸಲು ಮನವಿ
ಮಾಡಿಕೊಂಡಿದ್ದಾರೆ.