ಮಂಗಳೂರು, ಜೂ.17 (DaijiworldNews/HR): ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಟ್ಟೆ ಅಂಗಡಿಗೆ ನುಗ್ಗಿ ತಂಡ 50 ಸಾವಿರ ಹಣ ಕೇಳಿ ಸಿಕ್ಕಿ ಬಿದ್ದಿದ್ದು, ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತನನ್ನು ದೀಪಕ್ ರಾಜೇಶ್ ಕುವೆಲ್ಲೋ(45) ಎಂದು ಗುರುತಿಸಲಾಗಿದೆ.
ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ ಬಿಲ್ಡಿಂಗಿನ ಸಾಗರ್ ಕಲೆಕ್ಷನ್ ಅಂಗಡಿಗೆ ಮೂವರು ಯುವಕರ ತಂಡ ತಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡಿದ್ದು, ಲಾಕ್ಡೌನ್ ವೇಳೆ ಬಟ್ಟೆ ಅಂಗಡಿ ತೆರೆದು ವ್ಯಾಪಾರ ನಡೆಸಿರುವುದು ಕಾನೂನಿಗೆ ವಿರುದ್ದವಾಗಿದ್ದು, ನಿಮ್ಮ ಅಂಗಡಿ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆಂದು ಬೆದರಿಸಿದ್ದಾರೆ. ಆ ಬಳಿಕ 50 ಸಾವಿರ ದಂಡ ಕಟ್ಟುವಂತೆ ಹೆದರಿಸಿದ್ದಾರೆ.
ಇನ್ನು ಅಂಗಡಿ ಮಾಲಕ ಅಬ್ದುಲ್ ರೆಹಮಾನ್ ಅವರು ನಮ್ಮ ಬಳಿ ಅಷ್ಟು ಹಣ ನಮ್ಮಲ್ಲಿ ಇಲ್ಲ ನಾವು ಕೆಲಸದವರಿಗೆ ಸಂಬಳ ನೀಡುವುದಕ್ಕಾಗಿ ಅಂಗಡಿ ತೆರೆದಿದ್ದೇವೆ ಕೆಲವು ಚೆಕ್ ಕ್ಲಿಯರೆನ್ಸ್ ಬಾಕಿ ಇತ್ತು ಹಾಗಾಗಿ ಅದನ್ನು ಕ್ಲಿಯರೆನ್ಸ್ ಮಾಡುತ್ತಿದ್ದೆವೆ ಎಂದಿದ್ದಾರೆ.
ಆದರೆ ಅಧಿಕಾರಿಗಳ ಹೆಸರಿನಲ್ಲಿ ಬಂದಿದ್ದ ತಂಡ ಹಣ ಕೊಡದೇ ಅಲ್ಲಿಂದ ತೆರಳಲು ಕೇಳಲಿಲ್ಲ. ಕೊನೆಗೆ ಹತ್ತು ಸಾವಿರ ಹಣ ಕೊಡಿ ಎಂದು ಬಿಲ್ ಬರೆಯಲು ಮುಂದಾಗಿದ್ದು, ಅವರ ಬಳಿ ಮಹಾನಗರ ಪಾಲಿಕೆಯ ರಶೀದಿ ಇಲ್ಲದಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ಸಂಶಯಗೊಂಡು ಬಂದರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಬಂದರು ಠಾಣೆ ಪೊಲೀಸರು ಆಗಮಿಸಿ ಅಲ್ಲಿದ್ದ ದೀಪಕ್ ರಾಜೇಶ್ ಕುವೆಲ್ಲೋನನ್ನು ಬಂಧಿಸಿದ್ದು, ಆತನೊಂದಿಗಿದ್ದ ತೌಫಿಕ್ ಕಲಂದರ್ ಮತ್ತು ರಿಯಾಜ್ ಎಂಬ ಇಬ್ಬರು ಪೊಲಿಸರನ್ನು ನೋಡಿ ಪರಾರಿಯಾಗಿದ್ದಾರೆ.
ದೀಪಕ್ ರಾಜೇಶ್ ಕುವೆಲ್ಲೋ ಪೆರ್ಮನ್ನೂರು ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಆಧುನಿಕ ಹ್ಯೂಮನ್ ರೈಟ್ಸ್ ಎನ್ನುವ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಲಾಕ್ಡೌನ್ ವೇಲೆ ಅಂಗಡಿ ತೆರೆದಿದ್ದಾಕ್ಕಾಗಿ ಅಂಗಡಿಯ ವಿರುದ್ಧವು ಕೇಸು ದಾಖಲಾಗಿದೆ.