ಮಂಗಳೂರು, ಜೂ 17 (DaijiworldNews/MS): 10 ರೂ. ಪಾವತಿಸಲು ಹೋಗಿ ನಗರದ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ 1.69 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ನಗರದ ನಿವಾಸಿಯೊಬ್ಬರಿಗೆ ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ ಅನಾಮಿಕ ವ್ಯಕ್ತಿಯು ತನ್ನನ್ನು ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿಂದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ10 ರೂ. ಪಾವತಿಸುವಂತೆ ತಿಳಿಸಿದ್ದಾನೆ.
ಇದರೊಂದಿಗೆ ಹಣ ಪಾವತಿಸಲು ಲಿಂಕ್ ಕಳುಹಿಸಿದ್ದಾನೆ.
ಲಿಂಕ್ ತೆರೆದು ಯುಪಿಐ ಪಿನ್ ನಮೂದಿಸಿ 10 ರೂ. ಪಾವತಿಸಿದ ಬಳಿಕ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಕೆನರಾ, ಎಸ್ಬಿಐ, ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ 1,69,600 ರೂ. ವರ್ಗಾವಣೆಯಾಗಿದ್ದು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.