ಬಂಟ್ವಾಳ, ಜೂ. 16 (DaijiworldNews/SM): ಮಂಗಳವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ, ಮಳೆಗೆ ಬಂಟ್ವಾಳ ತಾಲೂಕಿನಲ್ಲಿ ಬುಧವಾರವು ಗುಡ್ಡೆ ಕುಸಿತ, ಮನೆ, ಶೌಚಾಲಯ, ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ.
ತೆಂಕಕಜೆಕಾರು ಗ್ರಾಮದ ಮಿತಲಿಕೆ ಎಂಬಲ್ಲಿನ ಇಬ್ರಾಯಿ ಅವರ ಮನೆಯ ಹಿಂಬದಿಯ ಗೋಡೆ ಕುಸಿದು ಬಿದ್ದಿದ್ದಲ್ಲದೆ ಮೇಲ್ಚಾವಣಿಗೂ ಹಾನಿಯಾಗಿದೆ ಮತ್ತು ಮನೆಯ ಹಲವೆಡೆ ಗೋಡೆ ಬಿರುಕು ಬಿಟ್ಟಿದೆ. ಸದ್ಯ ಮನೆಯವರನ್ನು ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುದ್ದಿ ತಿಳಿದ ಬಡಗ ಕಜೆಕಾರು ಗ್ರಾಪಂ ಪಿಡಿಒ ದೇವಕಿ,ಗ್ರಾಮಕರಣಿಕೆ ಕು.ನಿಶ್ಮಿತಾ,ಗ್ರಾಮಸಹಾಯಕ ಅಬ್ದುಲ್ ರಹಿಮಾನ್, ಪಂಚಾಯತ್ ಅಧ್ಯಕ್ಷೆ ಆಸ್ಮಾ, ಉಪಾಧ್ಯಕ್ಷ ಡೀಕಯ್ಯ ಬಂಗೇರ, ಸದಸ್ಯ ಸುರೇಶ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ.
ಹಾಗೆಯೇ ಶಂಭೂರು ಗ್ರಾಮದ ಸುಜಾತ ಎಂಬವರ ವಾಸ್ತವ್ಯದ ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಗೆ ಮರ ಬಿದ್ದು ಭಾಗಶ:ಹಾನಿಯಾಗಿದೆ.ಪುಣಚ ಗ್ರಾಮದ ನಡುಸಾರ ಎಂಬಲ್ಲಿ ಪುಟ್ಟ ನಾಯ್ಕ ಅವರ ಮನೆಯ ಶೌಚಾಲಯಕ್ಕೆ ಮರದ ರೆಂಬೆ ಬಿದ್ದು ಹಾನಿಯಾಗಿದೆ.ಪಿಲಿಮೊಗ್ರು ಗ್ರಾಮದ ಕೆಸೊಟ್ಟು ವಿನಲ್ಲಿ ಗಾಳಿಗೆ ಕೇಶವ ಭಟ್ ಅವರ ಅಡಕೆ ತೋಟಕ್ಕೆ ಹಾನಿಯಾಗಿದ್ದರೆ, ಮಂಚಿಗ್ರಾಮದ ಗಣಪತಿ ಭಟ್ ಅವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ ಆದೇರೀತಿ ಮಣಿನಾಲ್ಕೂರು ಗ್ರಾಮದ ಆಚಾರಿಬೆಟ್ಟು ಎಂಬಲ್ಲಿನ ಜನಾರ್ಧನ ಅವರ ಮನೆಗೆ ಮರ ಬಿದ್ದು ತೀವ್ರ ಹಾನಿಯಾಗಿದ್ದು ,ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.
ತಾಲೂಕಿನಲ್ಲಿ ಬುಧವಾರ ಸಾಧಾರಣ ಮಳೆಯಾಗಿದ್ದು, ಮಂಗಳವಾರ ಬೆಳಗ್ಗಿನಿಂದ 44.5 ಮೀ.ಮೀ.ಮಳೆಯಾಗಿದೆ. ನೇತ್ರಾವತಿ ನದಿಯಲ್ಲಿಯ 4.4 ಅಡಿ ಎತ್ತರದಲ್ಲಿ ನೀರು ಹರೊಯುತ್ತಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ತಾಲೂಕಿನ ಕಡೇಶ್ವಲ್ಯ ಗ್ರಾಮದ ಸಂಪೋಳಿ ಎಂಬಲ್ಲಿ ಬೃಹತ್ ಗಾತ್ರದ ಗೋಳಿಮರವೊಂದು ಸಂಜೆಯ ವೇಳೆಗೆ ಧರಾಶಾಹಿಯಾಗಿದ್ದು, ಪರಿಣಾಮ ಅಲ್ಲಿದ್ದ ಸುಮಾರು ಐದು ವಿದ್ಯುತ್ ಕಂಬಗಳು ಕೂಡ ಧರೆಗುರುಳಿದೆ ಎಂದು ತಿಳಿದು ಬಂದಿದೆ. ಹಳೇಯದಾದ ಈ ಮರ ಸ್ಥಳೀಯ ನಿವಾಸಿ ನಾಗೇಶ್ ಸಂಪೋಳಿ ಎಂಬವರ ಜಮೀನಿನಲ್ಲಿದ್ದು,ಪಕ್ಕದಲ್ಲಿ ನಾಲ್ಕೈದು ಮನೆಗಳು ಕೂಡ ಇದ್ದು, ಅದೃಷ್ಟವಶಾತ್ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.