ಉಡುಪಿ, ಜೂ 16 (DaijiworldNews/PY): ಉಡುಪಿಯ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದ 14 ಮಕ್ಕಳು ಸೇರಿದಂತೆ 21 ಮಂದಿಗೆ ಏಕ ಕಾಲದಲ್ಲಿ ಕೊರೊನಾ ದೃಢಪಟ್ಟಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.
ಮೇ 26ರಂದು ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದ 14 ಮಕ್ಕಳು ಸೇರಿದಂತೆ ಎಲ್ಲಾ 21 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು ಈ ಹಿನ್ನೆಲೆ ಅವರನ್ನು ಕೃಷ್ಣಾನುಗ್ರಹದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ದತ್ತು ಸ್ವೀಕಾರ ಕೇಂದ್ರದಲ್ಲಿ ಒಟ್ಟು 29 ಮಂದಿ ಅನಾಥ, ವಿಕಲಚೇತನ ಹಾಗೂ ವಿಶೇಷ ಮಕ್ಕಳಿದ್ದು, ಹತ್ತು ಮಂದಿ ಸಿಬ್ಬಂದಿಗಳು ಸೇರಿದಂತೆ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಕೊರೊನಾ ಪರೀಕ್ಷೆಯ ಫಲಿತಾಂಶದ ವೇಳೆ 21 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ 17 ಮಕ್ಕಳು ಹಾಗೂ ಇಬ್ಬರು ಸಿಬ್ಬಂದಿಗಳಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು.
ಇದೀಗ 14 ದಿನಗಳ ಚಿಕಿತ್ಸೆಗೆ ಸ್ಪಂದಿಸಿರುವ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದು, ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.