ಮಂಗಳೂರು, ಜೂ 15( DaijiworldNews/MS): ಜಿಲ್ಲಾಡಳಿತದ ನಿರ್ಲಕ್ಷ ಹಾಗೂ ಮರಳು ದಂಧೆಯೇ ಮರವೂರು ಸೇತುವೆಗೆ ಹಾನಿಯಾಗಲು ಪ್ರಮುಖ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಅಪಾದಿಸಿದ್ದಾರೆ.
ಅವರು ಜೂ 15 ರ ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, " ಮರವೂರು ಸೇತುವೆಯೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದ್ದು, ಹೂಳೆತ್ತುವ ನೆಪದಲ್ಲಿ ಮರವೂರು ಸೇತುವೆ ಸುತ್ತಮುತ್ತ ಅಕ್ರಮ ಮರಳುಗಾರಿಕೆ ದಂಧೆ ಎಗ್ಗಿಲ್ಲದೆ ಸಾಗಿದೆ. ಇದೆಲ್ಲವುದನ್ನು ಕಂಡು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿಕುಳಿತಿರುವುದೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದರು.
ಗಣಿಗಾರಿಕೆ ಇಲಾಖೆಯ ಭ್ರಷ್ಟ ಅಧಿಕಾರಿಗಳೂ ಮರಳು ಮಾಫಿಯದಲ್ಲಿ ಭಾಗಿಗಳಾಗಿದ್ದು, ಇದೆಲ್ಲದರ ಪರಿಣಾಮ ವಿಮಾನ ನಿಲ್ದಾಣಕ್ಕೆ 20 ನಿಮಿಷದಲ್ಲಿ ತಲುಪಬಹುದಾದ ರಸ್ತೆಗೆ ಇದೀಗ ಗಂಟೆ ವ್ಯಯಿಸಬೇಕಾಗುತ್ತದೆ. ಮರವೂರು ಸೇತುವೆಯ ಜತೆಗೆ ಬಹುಗ್ರಾಮ ಕುಡಿಯುವ ನೀರಿಗಾಗಿ ಹಿಂದಿನ ಶಾಸಕರಾದ ವಿಜಯ ಕುಮಾರ್ ಶೆಟ್ಟಿಯವರ ಮುತುವರ್ಜಿಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೂ ಅಪಾಯವಿದೆ. ಇದಲ್ಲದೆ ಕೊಂಕಣ ರೈಲ್ವೇಯ ಸೇತುವೆಯೂ ಇಲ್ಲಿಂದಲೇ ಹಾದು ಹೋಗುತ್ತಿದ್ದು, ಅದಕ್ಕೂ ಹಾನಿಯಾಗುವ ಸಂಭವ ಇದೆ ಎಂದು ಅಭಯಚಂದ್ರ ಜೈನ್ ಆತಂಕ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಡ್ರೆಜ್ಜಿಂಗ್ ನೆಪದಲ್ಲಿ ಇಲ್ಲಿ ಪ್ರತಿನಿತ್ಯ ಮರುಳುಗಾರಿಕೆ ನಡೆಯುತ್ತಿರುವುದರಿಂದ ಈ ದುರಂತ ನಡೆದಿದೆ. ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಆಗದಂತೆ ಹೊಸ ಸೇತುವೆ ಕಾಮಗಾರಿಯನ್ನು ಅದಷ್ಟು ಶೀಘ್ರದಲ್ಲಿ ಸಂಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ವಿನಯರಾಜ್, ಶಾಲೆಟ್ ಪಿಂಟೋ, ಅನಿಲ್ ಕುಮಾರ್, ಮೆರಿಲ್ ರೇಗೋ, ಸವದ್ ಸುಳ್ಯ, ಸಿರಾಜ್, ಹನೀಫ್ ಮುಂತಾದವರು ಉಪಸ್ಥಿತರಿದ್ದರು.