ಮಂಗಳೂರು, ಜೂ 15 (DaijiworldNews/PY): ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮುಲ್ಕಿಯ ಐಕಳ ಬಳಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾವನ್ನಪ್ಪಿದ ವ್ಯಕ್ತಿಯನ್ನು ಮಾಧವ ಆಚಾರ್ಯ (55) ಎಂದು ಗುರುತಿಸಲಾಗಿದೆ.
ಜೂನ್ 12ರ ಶನಿವಾರದಂದು ಸುರಿದ ಭಾರೀ ಮಳೆಯ ಪರಿಣಾಮ ಮಾಧವ ಆಚಾರ್ಯ ಅವರ ಮನೆಗೆ ಮರದ ಗೆಲ್ಲು ಬಿದ್ದ ಕಾರಣ ಕಿನ್ನಿಗೋಳಿ ಮೆಸ್ಕಾಂ ಸಿಬ್ಬಂದಿಗೆ ಸಂಪರ್ಕಿಸಿದ ವೇಳೆ ಅವರು ಮರದ ಗೆಲ್ಲು ಕಡಿಯಲು ನಿರಾಕರಿಸಿದ್ದು, ಭಾನುವಾರ ಮೆಸ್ಕಾಂ ಸಿಬ್ಬಂದಿ ಬಂದು ತಾತ್ಕಾಲಿಕವಾಗಿ ವಿದ್ಯುತ್ ವಯರ್ಗಳನ್ನು ಸಿಕ್ಕಿಸಿ ಮನೆಯವರಿಗೆ ಎಚ್ಚರಿಕೆ ನೀಡಿದ್ದರು.
ಮೆಸ್ಕಾಂ ಸಿಬ್ಬಂದಿ ಹೋದ ನಂತರ ಗಾಳಿ-ಮಳೆಯ ಪರಿಣಾಮ ಹಾನಿಗೀಡಾಗಿದ್ದ ಮನೆಯ ಹಂಚನ್ನು ಸರಿಪಡಿಸಲು ಮನೆಯವರು ಮುಂದಾಗಿದ್ದರು. ಜನಾರ್ಧನ ಆಚಾರ್ಯ ಎಂಬವರು ಏಣಿ ಇಟ್ಟು ಮೇಲೇರುತ್ತಿದ್ದ ಸಂದರ್ಭ ಆಯತಪ್ಪಿ ಏಣಿ ವಿದ್ಯುತ್ ತಂತಿಗೆ ತಾಗಿ ಶಾಕ್ ಆಗಿದೆ. ಈ ವೇಳೆ ಮಾಧವ ಆಚಾರ್ಯ ಅವರು ತಂತಿಗೆ ಏಣಿ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಏಣಿಯನ್ನು ಹಿಡಿದಿದ್ದು, ವಿದ್ಯುತ್ ಶಾಕ್ ಆಗಿ ಪ್ರಜ್ಞೆ ತಪ್ಪಿದ್ದಾರೆ. ಕಿನ್ನಿಗೋಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ಮಾಧವ ಆಚಾರ್ಯ ಅವರು ಮರದ ಕೆಲಸ ಮಾಡುತ್ತಿದ್ದು, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಘಟನೆಯ ಬಗ್ಗೆ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.