ಉಡುಪಿ, ಜೂ. 14 (DaijiworldNews/SM): ಹಸಿವೆಯ ಅನುಭವ ಒಬ್ಬ ಹಸಿದವನಿಗೆ ಮಾತ್ರ ತಿಳಿದಿರುತ್ತದೆ. ಮಹಾಮಾರಿ ಕೊರೊನಾ ಬಡವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಉಡುಪಿಯ ಕೂಲಿ ಕಾರ್ಮಿಕರೊಬ್ಬರ ಹೃದಯ ಮಿಡಿದಿದೆ. ತನಗಿಂತಲೂ ಸಂಕಷ್ಟ ಸ್ಥಿತಿಯಲ್ಲಿರುವ ಎಪ್ಪತ್ತು ಕುಟುಂಬಕ್ಕೆ ಅನ್ನ ನೀಡುವ ಮಹತ್ಕಾರ್ಯ ಮಾಡಿದ್ದಾರೆ.
ಕೊರೋನಾ ಎಲ್ಲರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೂಲಿನಾಲಿ ಮಾಡಿ ಜೀವನ ಕಟ್ಟಿಕೊಂಡಿದ್ದ ಬಡವರನ್ನು ಮೇಲೇಳದಂತೆ ಪಾತಾಳಕ್ಕೆ ತಳ್ಳಿದೆ. ಅಗರ್ಭ ಶ್ರೀಮಂತನೂ ಲೆಕ್ಕಾಚಾರ ಮಾಡುವ ಸ್ಥಿತಿ ಬಂದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿಯ ಬಡ ಕೂಲಿ ಕಾರ್ಮಿಕ ಅಂಬಲಪಾಡಿಯ ಕೃಷ್ಣ ಅವರು ತನಗಿಂತಲೂ ಕಠಿಣ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ಅವರ ಪಾಲಿನ ಸಾಕ್ಷಾತ್ ದೇವರು ಎಣಿಸಿಕೊಂಡಿದ್ದಾರೆ.
ಅಂಬಲಪಾಡಿಯ ಕೃಷ್ಣ ಅವರು, ಕೂಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಜೀವನದ ಬಂಡಿಯೋಡಿಸಲೇ ಕಠಿಣ ಪರಿಶ್ರಮ ಪಡುವುವುದು ಇವರಿಗೆ ಅನಿವಾರ್ಯತೆ ಇದೆ. ಅದರಲ್ಲೂ, ದಲಿತ ಸಮುದಾಯದ ಕೃಷ್ಣ ಬೆವರು ಸುರಿಸಿ ಸಂಪಾದಿಸಿದ ಸುಮಾರು ೭೦ ಸಾವಿರ ರೂಪಾಯಿಯನ್ನು ದಾನ ಮಾಡಿದ್ದು, ೭೦ ಕುಟುಂಬಗಳಿಗೆ ಆಸರೆಯಾಗಿದ್ದಾರೆ.
"ನನ್ನ ಬಳಿ ಇದ್ದು ನಾನು ಇದನ್ನು ನೀಡಿಲ್ಲ. ವಿಶು ಶೆಟ್ಟಿ ಅವರ ಸಮಾಜಸೇವೆಯನ್ನು ನೋಡಿ ನಾನು ಕಲಿತಿದ್ದೇನೆ. ೫೦ ಕಿಟ್ ನನ್ನು ವತಿಯಿಂದ ನೀಡಿದ್ದೇನೆ, ನನ್ನ ಸ್ನೇಹಿತ ರವಿ ಪಂಜಿಮಾರ್ ಕೂಡಾ ಇದಕ್ಕೆ ಸಹಾಯ ಮಾಡಿದ್ದಾರೆ. ಇದ್ದವರು ಇಲ್ಲದವರಿಗೆ ಸಹಾಯ ಮಾಡಿದರೆ ಉತ್ತಮವಾಗುತ್ತದೆ. ಕಷ್ಟ ಎಂದರೆ ಏನು ಎಂಬುವುದು ನನಗೆ ಗೊತ್ತು. ನನ್ನ ಸ್ನೇಹಿತರು ಕಟಪಾಡಿ, ಅಂಬಲಪಾಡಿ, ಕಪ್ಪೆಟ್ಟು ಈ ಮುಂತಾದ ಕಡೆಯ ಬಡವರನ್ನು ಗುರುತಿಸಿ ಕಿಟ್ ನೀಡಿದ್ದೇವೆ" ಎಂದರು.
ಕೃಷ್ಣ ಆರ್ಥಿಕವಾಗಿ ಶ್ರೀಮಂತನಲ್ಲ. ಹೆಚ್ಚಿನ ಶ್ರೀಮಂತರಿಗೆ ಇಲ್ಲದ ಹೃದಯ ಶ್ರೀಮಂತಿಕೆ ಕೃಷ್ಣನಿಗೆ ಇದೆ. ತಾನು ಒಂದೆರಡು ವರ್ಷ ಸಂಪಾದಿಸಿದ ಕೂಲಿ ಹಣದಲ್ಲಿ ಪ್ರತಿದಿನ ಪ್ರತ್ಯೇಕವಾಗಿ ಕೂಡಿಡುತ್ತಿದ್ದರು. ಸಮಸ್ಯೆಯ ಈ ಸಂದರ್ಭದಲ್ಲಿ ಎಲ್ಲವನ್ನೂ ದಾನಮಾಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.