ಉಡುಪಿ, ಜೂ 14 (DaijiworldNews/PY): ಪೆಟ್ರೋಲ್ ದರ ಏರಿಕೆ ಖಂಡಿಸಿ ಉಡುಪಿ ಜಿಲ್ಲಾ ಆರ್ಜಿಪಿಆರ್ ಸಂಘಟನೆ ನೇತೃತ್ವದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಸುತ್ತಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಪ್ರತಿಭಟನೆಯನ್ನು ಸಂತೆಕಟ್ಟೆಯ ಪೆಟ್ರೋಲ್ ಬಂಕ್ ಬಳಿ ಸೋಮವಾರ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ, "ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ಸಮಯದಲ್ಲಿ ಯಾವ ಮುಲಾಜು ಇಲ್ಲದೆ ಪೆಟ್ರೋಲ್, ಡಿಸೇಲ್ ಗ್ಯಾಸ್, ವಿದ್ಯುತ್ ದರ ಏರಿಸುವ ಮೂಲಕ ಜನರ ಮೇಲೆ ಬರೆ ಹಾಕುತ್ತಿದೆ" ಎಂದು ಹೇಳಿದರು.
ಮುಖಂಡ ಹರೀಶ್ ಕಿಣಿ ಮಾತನಾಡಿ, "ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವಾಗ ಇಂಧನ ಬೆಲೆ ಕಡಿಮೆಗೊಳಿಸುವುದಾಗಿ ಹೇಳಿತ್ತು. ಆದರೆ ಇದೀಗ ಇಂಧನ ಬೆಲೆ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಯುಪಿಎ ಸರಕಾರ ಇರುವಾಗ ತೈಲ ಬೆಲೆ ಏರಿಕೆ ಕಂಡಾಗ ಎದ್ದು ಬಂದು ಪ್ರತಿಭಟಿಸುತ್ತಿದ್ದ ಅಣ್ಣಾ ಹಜಾರೆ, ಬಾಬಾ ರಾಮ್ ದೇವ್, ನಿತ್ಯಾನಂದ ಸ್ವಾಮಿಯ ಹೊಸದೇಶದಲ್ಲಿ ಹೋಗಿ ಅಡಗಿ ಕೂತಿದ್ದಾರೆಯೇ?" ಎಂದು ಪ್ರಶ್ನಿಸಿದರು.
ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಸಂಯೋಜಕಿ ರೋಶಿನಿ ಒಲಿವೆರಾ ಅವರು ಸೈಕಲ್ ಚಲಾಯಿಸಿ ಹಾಗೂ ಸಂಯೋಜಕರು ತಮ್ಮ ಪೆಟ್ರೋಲ್ ವಾಹನವನ್ನು ರಸ್ತೆಯಲ್ಲಿ ದೂಡಿಕೊಂಡು ಪ್ರತಿಭಟನೆ ಮಾಡಿದರು. ಕೇಂದ್ರ ಸರ್ಕಾರ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೆರೋನಿಕಾ ಕರ್ನೆಲಿಯೋ, ಡಾ ಸುನೀತಾ ಶೆಟ್ಟಿ, ರಮೇಶ್ ಕಾಂಚನ್, ಪ್ರಖ್ಯಾ್ ಶೆಟ್ಟಿ, ಅಮೃತ, ಐರಿನ್ ಅಂದ್ರಾದೆ, ಸೂರ್ಯ ಸಾಲಿಯನ್, ಶಂಕರ್ ನಾಯಕ್, ರೋಶನ್ ಬೆರೆಟ್ಟೊ, ಸತೀಶ್ ಜಪ್ತಿ, ನಜೀರ್, ಉಮೇಶ್ ಮರೀನಾ, ರೊಸಲೀನ್, ಆಶಾ, ಶೋಭಾ ಮತ್ತಿತ್ತರ ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.