ಮಂಗಳೂರು, ಜೂ 14(DaijiworldNews/MS): ರಕ್ತದಾನ ಜೀವದಾನ, ಮಾತ್ರವಲ್ಲ ಅದೊಂದು ಶ್ರೇಷ್ಟದಾನ. ಕೊರೊನಾ ಸಂಕಷ್ಟ ಕಾಲದಲ್ಲಿ ರಕ್ತದ ಕೊರತೆ ಹಾಗೂ ರಕ್ತದಾನಿಗಳ ಕೊರತೆ ಹಲವು ಆಸ್ಪತ್ರೆಗಳಲ್ಲಿ ಒಂದು ಸವಾಲಾಗಿ ಕಾಣಿಸಿಕೊಂಡಿತ್ತು. ಈ ಕಠಿಣ ಕಾಲದಲ್ಲಿ ರಕ್ತದಾನ ಮಾಡಲು ಮುಂದೆ ಬರುವ ದಾನಿಗಳು ಬಹಳ ಕಡಿಮೆ ಇದ್ದರು. ಆದರೆ ಐ.ಸಿ.ವೈ.ಎಮ್. ರೆಡ್ ಡ್ರಾಪ್ನಿಂದ ನಡೆಯುತ್ತಿರುವ ಈ ಯೋಜನೆಯು ಕಷ್ಟಕರ ಅವಧಿಯಲ್ಲಿ ರಕ್ತದ ಅಗತ್ಯವಿರುವ ವಿವಿಧ ಜನರಿಗೆ ರಕ್ತದಾನಿಗಳನ್ನು ನಿರಂತರವಾಗಿ ಒದಗಿಸಿದೆ.
ರೆಡ್ ಡ್ರಾಪ್ ಮಂಗಳೂರು ಎಂಬ ಮೊಬೈಲ್ ಆಪ್ಲಿಕೇಷನ್ ಮೂಲಕ ನಿರ್ವಹಿಸುವ ಈ ವಿಭಿನ್ನ ಯೋಜನೆಯು ರಕ್ತದ ಅಗತ್ಯವಿರುವ ವಿವಿಧ ಫಲಾನುಭವಿಗಳನ್ನು ಗುರುತಿಸುತ್ತದೆ ಮತ್ತು ಅಗತ್ಯವಿರುವ ವಿವಿಧ ದಾನಿಗಳನ್ನು ತಲುಪುತ್ತದೆ. ಈ ರೆಡ್ ಡ್ರಾಪ್ ಯೋಜನೆಯು ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ ಲಾಕ್ಡೌನ್ ಅವಧಿಯಲ್ಲಿ ಈ ಯೋಜನೆಯನ್ನು ರೆಡ್ ಡ್ರಾಪ್ ಮಂಗಳೂರು ಎಂಬ ಮೊಬೈಲ್ ಆಪ್ಲಿಕೇಷನ್ ಮುಖಾಂತರ ಹೆಚ್ಚು ಪರಿಣಾಮಕಾರಿಯಾಗಿ ಬಳಸಲಾಗುತ್ತಿದ್ದು, ಇದು ರಕ್ತದ ಅಗತ್ಯವಿರುವ ಅನೇಕ ಜನರನ್ನು ತಲುಪಿದೆ. ಪ್ರತಿದಿನ 10 ರಿಂದ 15 ದಾನಿಗಳು ಹೆಚ್ಚಾಗಿ ಯುವಕರಾಗಿದ್ದು ರೆಡ್ ಡ್ರಾಪ್ ಮೂಲಕ ರಕ್ತವನ್ನು ಒದಗಿಸುತ್ತಾರೆ.
ರೆಡ್ ಡ್ರೊಪ್ ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯದ ಒಂದು ಯೋಜನೆಯಾಗಿದ್ದು ನಿರ್ದೇಶಕರಾದ ವಂದನೀಯ ಸ್ವಾಮಿ ಅಶ್ವಿನ್ ಕಾರ್ಡೋಜಾ ,ಅಧ್ಯಕ್ಷರಾದ ಲಿಯೋನ್ ಸಲ್ಡಾನ್ಹಾ , ಕಾರ್ಯದರ್ಶಿ ವೀಣಾ ವಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಿನೋಲ್ ಬ್ರ್ಯಾಗ್ಸ್ ಹಾಗೂ ಈ ಲಾಕ್ಡೌನ್ ಸಂದರ್ಭದಲ್ಲಿ ಪ್ರವೀಣ್ ಕ್ರಾಸ್ತಾ ಇವರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಕ್ತದಾನ ಮಾಡುವುದರ ಮೂಲಕ ಹಲವಾರು ಜೀವಗಳನ್ನು ಉಳಿಸುವುದರಲ್ಲಿ ದಾನಿಗಳ ಪಾತ್ರ ಶ್ಲಾಘನೀಯ. ಜೂ. 14 ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ "ರೆಡ್ ಡ್ರೋಪ್" ಎಲ್ಲಾ ರಕ್ತದಾನಿಗಳಿಗೆ ಶುಭಕೋರುತ್ತದೆ. ಈ ಪುಣ್ಯದ ಕೆಲಸದಲ್ಲಿ ನಾವೂ ರಕ್ತದಾನ ಮಾಡುವುದರ ಮೂಲಕ ಭಾಗಿಯಾಗೋಣ ಎಂದು ಕರೆ ನೀಡಿದೆ.