ಮಂಗಳೂರು, ಜೂ. 13 (DaijiworldNews/SM): ತುಳು ಭಾಷೆಗೆ ಮಾನ್ಯತೆ ನೀಡಬೇಕೆಂಬ ಕೂಗು ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ತುಳುಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಲೇ ಇವೆ. ಇದೀಗ ಮತ್ತೊಮ್ಮೆ ತುಳುನಾಡಿನ ಯುವ ಸಮೂಹ ಒಂದಾಗಿದ್ದು, ಟ್ವಿಟ್ಟರ್ ಮೂಲಕ ಆಗ್ರಹ ವ್ಯಕ್ತಪಡಿಸಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಮಂದಿ ಇಲ್ಲಿಯ ತನಕ ಟ್ವೀಟ್ ಮಾಡಿದ್ದು, ತುಳು ಭಾಷಾ ಸ್ಥಾನಮಾನಗಳಿಗಾಗಿ ಒತ್ತಾಯಿಸಿದ್ದಾರೆ.
ಜೈ ತುಳುನಾಡು ಸಂಘಟನೆ ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರು ಟ್ವಿಟ್ಟರ್ ಮೂಲಕ ಕೈಜೋಡಿಸಿದ್ದಾರೆ. #TuluOfficialinKA_KL ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಅಭಿಯಾನ ನಡೆಸಿದ್ದಾರೆ. ಈ ಹಿಂದಿನಂತೆ ಟ್ವಿಟರ್ ಅಭಿಯಾನ ಕೇವಲ ಹ್ಯಾಷ್ ಟ್ಯಾಗ್ ನಲ್ಲೇ ನಿಲ್ಲದೆ, ಅಧಿಕೃತ ಸ್ಥಾನಮಾನ ಸಿಗುವ ತನಕವೂ ಮುಂದುವರೆಯಬೇಕಾಗಿದೆ.
ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್ ಅಭಿಯಾನ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೆ, ತುಳು ಸಾಹಿತ್ಯ ಅಕಾಡೆಮಿ, ಜನಪ್ರತಿನಿಧಿಗಳು ಗಣ್ಯರು ಕೂಡ ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಇದೆಲ್ಲವೂ ಸರ್ಕಾರದ ಗಮನಕ್ಕೆ ಬಂದರೂ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಇದೀಗ ಮತ್ತೊಮ್ಮೆ ತುಳುನಾಡಿಗರು ಮಾನ್ಯತೆ ಸಿಗುವ ಭರವಸೆಯೊಂದಿಗೆ ಅಭಿಯಾನ ಆರಂಭಿಸಿದ್ದು, ಅಧಿಕೃತ ಸ್ಥಾನಮಾನದ ಭರವಸೆಯಲ್ಲಿದ್ದಾರೆ.
ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಅದಕ್ಕೂ ಮಿಗಿಲಾಗಿ ತುಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯವಿದೆ. ದ.ಕ. ಜಿಲ್ಲೆಯಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬಿಜೆಪಿ ಶಾಸಕರೇ. ನೆರೆಯ ಉಡುಪಿ ಹಾಗೂ ಕಾಪುವಿನಲ್ಲೂ ಬಿಜೆಪಿ ಶಾಸಕರಿದ್ದು, ಮಾನ್ಯತೆ ಪಡೆದುಕೊಳ್ಳುವುದು ಕಬ್ಬಿಣದ ಕಡಲೆಯಂತು ಅಲ್ಲವೇ ಅಲ್ಲ. ಇದರ ಹೊರತಾಗಿ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದು, ತುಳುವರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ತುಳು ಭಾಷೆಯ ಬಗ್ಗೆ ಒಲವನ್ನು ಹೊಂದಿದವರಾಗಿದ್ದಾರೆ. ಇಷ್ಟೆಲ್ಲ ಇರುವ ಸಂದರ್ಭದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ ಗಿಟ್ಟಿಸಿಕೊಳ್ಳುವುದೇನು ಪರ್ವತ ಹೋರುವ ಕೆಲಸವಲ್ಲ.
ತುಳಿ ಸಂಘಟನೆಗಳು ನಡೆಸಿದ ಟ್ವೀಟರ್ ಅಭಿಯಾನಕ್ಕೆ ಕರಾವಳಿ ಭಾಗದ ನಾಯಕರು ಧ್ವನಿಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವತಃ ತುಳುನಾಡಿನವರೇ ಆಗಿದ್ದು, ತುಳುವಿನ ಸ್ಥಾನಮಾನಕ್ಕೆ ಅವರೂ ಕೂಡ ಟ್ವೀಟ್ ಮಾಡಿದ್ದು, ಶೀಘ್ರದಲ್ಲೇ ಸೂಕ್ತ ಸ್ಥಾನಮಾನ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ಉಮಾನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯಕ್ ಟ್ವೀಟ್ ಮೂಲಕ ತುಳು ಭಾಷಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಮತ್ತೊಂದೆಡೆ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಬಿಜೆಪಿಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮಾತ್ರವಲ್ಲದೆ ಹಲವು ಗಣ್ಯರು ಬೆಂಬಲ ಸೂಚಿದ್ದಾರೆ. ತುಳು ಚಿತ್ರ ರಂಗದ ಹಲವು ಕಲಾವಿದರೂ, ಧಾರ್ಮಿಕ ಮುಖಂಡರು ಕೂಡ ತುಳು ಭಾಷೆಯ ಪರ ನಿಂತಿದ್ದಾರೆ. ತುಳುಭಾಷಿಗರೇ ಅತ್ಯಧಿಕವಾಗಿ ಅಭಿಯಾನದಲ್ಲಿ ಕೈ ಜೋಡಿಸಿದ್ದು, ಸೂಕ್ತ ಸ್ಥಾನಮಾನದ ಭರವಸೆಯಲ್ಲಿದ್ದಾರೆ.
ಇಂದಿನ ಟ್ವೀಟರ್ ಅಭಿಯಾನದಲ್ಲಿ ಕೈಜೋಡಿಸಿದ ಜನನಾಯಕರು, ರಾಜಕೀಯ ಮುಖಂಡರು ತುಳು ಅಧಿಕೃತ ಭಾಷೆಯಾಗಿ ಪರಿಗಣಿಸಲ್ಪಡುವ ತನಕವೂ ಸಂಪೂರ್ಣವಾಗಿ ಶ್ರಮಿಸಲಿ ಎಂಬುವುದು ತುಳುವರ ಆಶಯ.