ಸುಳ್ಯ, ಜೂ. 13 (DaijiworldNews/SM): ಕಳೆದ ಮೂರು ದಿನಗಳ ಹಿಂದೆ 26ರಷ್ಟಿದ್ದ ಪಾಸಿಟಿವಿಟಿ ದರ ಪ್ರಸ್ತುತ 7ಕ್ಕೆ ಬಂದಿದೆ. ಮುಂದಿನ ಒಂದು ವಾರಗಳ ಕಾಲ ನಮಗೆ ಮಹತ್ವದ್ದಾಗಿದ್ದು ಸಮುದಾಯಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡಿಸಿ ಪಾಸಿಟಿವಿಟಿ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ತಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪೊಲೀಸರು ಲಾಕ್ ಡೌನ್ ನಿಯಮಗಳ ಪಾಲನೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಇನ್ನು ಸಚಿವ ಎಸ್. ಅಂಗಾರ ಮಾತನಾಡಿ ಸಮುದಾಯದಲ್ಲಿ ಕೊರೊನಾ ಟೆಸ್ಟಿಂಗ್ ಮಾಡಿದರೆ ಸೋಂಕು ಹರಡುವಿಕೆಯನ್ನು ಬೇಗ ಪತ್ತೆ ಮಾಡಿ ಮಟ್ಟಹಾಕಬಹುದು ಎಂದರು. ತಹಶಿಲ್ದಾರ್ ಅನಿತಾಲಕ್ಷ್ಮೀ ಮಾತನಾಡಿ ನಾವು ತಾಲೂಕಿನ ಎಲ್ಲಾ ಕಡೆ ಟೆಸ್ಟಿಂಗ್ ಮಾಡುತ್ತಿದ್ದೇವೆ. ಪ್ರತೀ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಗಳಲ್ಲಿ 100 ಟೆಸ್ಟಿಂಗ್ ಹಾಗೂ ಸೋಂಕಿತರು ಪತ್ತೆಯಾದ ಸಮೀಪದ 50 ಮಂದಿಗೆ ಟೆಸ್ಟ್ ಮಾಡಿಸುತ್ತಿದ್ದೇವೆ ಎಂದರು.
ಅಧಿಕಾರಿಗಳು ಬಂದು ಟೆಸ್ಟಿಂಗ್ ಮಾಡಿ ಸುಮ್ಮನೇ ಪಾಸಿಟಿವ್ ವರದಿ ನೀಡುತ್ತಾರೆ ಎಂಬ ಭಯ ಜನರಲ್ಲಿದೆ. ಟೆಸ್ಟ್ ನಿಜವಾದ ಉದ್ದೇಶವನ್ನು ಜನರಿಗೆ ವಾಹನ ಜಾಥದ ಮೂಲಕ ಸಾರಬೇಕು ಎಂದರು.