ಉಡುಪಿ, ಜೂ 13 (DaijiworldNews/PY): "ಈಗಾಗಲೇ ಆನ್ಲೈನ್ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವಶ್ಯಕವಾಗಿರುವ ಪುಸ್ತಕ, ಪೆನ್ನು ಮತ್ತು ಸ್ಟೇಶನರಿ ವಸ್ತುಗಳ ಹಾಗೂ ಮೊಬೈಲ್, ಮೊಬೈಲ್ ರಿಪೇರಿ ಹಾಗೂ ಬಿಡಿಭಾಗಗಳನ್ನು ಖರೀದಿಸಲು ಅವಕಾಶ ನೀಡುವುದು ಅವಶ್ಯಕವೆಂದು ಮನಗಂಡು ಜೂನ್ 16ರ ಬುಧವಾರದಂದು ಒಂದು ದಿನದ ಮಟ್ಟಿಗೆ ಮಾತ್ರವೇ ಬುಕ್ಸ್ಟಾಲ್, ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳನ್ನು ಬೆಳಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ತೆರೆಯಲು ಅನುಮತಿಯನ್ನು ನೀಡಲಾಗಿದೆ" ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
"ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಗಮನಿಸಲಾಗಿದೆ. ಇವು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಅಲ್ಲದೇ, ಕೊರೊನಾ ಪ್ರಕರಣಗಳ ಪ್ರಸರಣಕ್ಕೆ ಕಾರಣವಾಗಿ ಈವರೆಗೆ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು ಪ್ರಕರಣಗಳಲ್ಲಿ ಏರಿಕೆಯಾಗುವ ಸಂಭವವಿದೆ. ಇನ್ನು ಮುಂದೆ ಯಾವುದೇ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಸಂಘ-ಸಂಸ್ಥೆಗಳು, ಸಾರ್ವಜನಿಕರು ಯಾವುದೇ ಸನ್ಮಾನದಂತಹ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಆಹಾರ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಮುಂತಾದ ವೈದ್ಯಕೀಯ ಪರಿಕರಗಳನ್ನು ವಿತರಿಸುವ ಸಂಘ ಸಂಸ್ಥೆಗಳು ಯಾವುದೇ ಸಭೆ ಸಮಾರಂಭಗಳನ್ನು ಆಯೋಜಿಸದೇ ಅವುಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡುವುದರ ಮುಖಾಂತರ ಸಹಕರಿಸಬೇಕು" ಎಂದು ತಿಳಿಸಿದ್ದಾರೆ.