ಕಾರ್ಕಳ, ಜೂ. 13 (DaijiworldNews/HR): ಕೊರೊನಾ ಸಂಕಷ್ಟದಲ್ಲಿ ದಿನಗಳಲ್ಲಿ ತಮ್ಮ ಕಷ್ಟಗಳನ್ನು ಬದಿಗಿಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀದಿಗಳ ಸ್ವಚ್ಚ ಕಾರ್ಯಕ್ಕೆ ಸ್ವಚ್ಚ ಭಾರತ್ ಮಿಷನ್ ಕಾರ್ಯಕರ್ತರು ಮುಂದಾಗುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಗ್ರಾಮ ಪಂಚಾಯತ್ ಗಳ ಅಧೀನದಲ್ಲಿರುವ ಸ್ವಚ್ಚ ಸಂಕೀರ್ಣದ ಎಸ್ಎಲ್ಆರ್ಎಂ ಕಾರ್ಯಕರ್ತರ ಕಾರ್ಯ ವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿವೆ. ಉಡುಪಿ ಜಿಲ್ಲೆಯ ಹಲವಾರು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಎಸ್ಎಲ್ಆರ್ಎಂ ಕಾರ್ಯಕರ್ತರು ಕೋವಿಡ್-೧೯ ಲಾಕ್ಡೌನ್ ಸಮಯದಲ್ಲಿ ಯಾವುದೇ ರೀತಿಯಲ್ಲಿ ಭಯಭೀತರಾಗದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಉಡುಪಿ ಜಿಲ್ಲೆಯ ಸುಮಾರು 110 ಗ್ರಾಮ ಪಂಚಾಯತ್ಗಳಲ್ಲಿ 350 ಜನ ಕಾರ್ಯಕರ್ತರಿದ್ದು ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿ ಮಹಿಳೆಯರೇ ಬಹುತೇಕ ಸಂಖ್ಯೆಯಲ್ಲಿ ತಮ್ಮನ್ನು ತಾವು ಈ ಕಾರ್ಯಕ್ಕೆ ತೊಡಗಿಸಿ ಕೊಂಡಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ದಿನ ನಿತ್ಯ ಹಸಿ ಹಾಗೂ ಒಣ ಕಸಗಳನ್ನು ಸಂಗ್ರಹಿಸಿ ಘಟಕಕ್ಕೆ ತಂದು ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿ ಸುಮಾರು 30 ವಿಧವಾಗಿ ಪ್ರತ್ಯೇಕಿಸುತ್ತಾರೆ. ಶೇಖರಿಸುವ ತ್ಯಾಜ್ಯದಿಂದ ದುರ್ವಾಸನೆಗೆ ಅವಕಾಶ ನೀಡದಂತೆ ಈ ಕಾರ್ಯಕರ್ತರು ಜವಾಬ್ದಾರಿ ವಹಿಸುತ್ತಿದ್ದಾರೆ.
ಗ್ರಾಮಸ್ಥರು ತಾವು ಬಳಸಿ ನಿರುಪಯುಕ್ತವೆಂದು ಎಸೆಯುವ ವಸ್ತುಗಳನ್ನು ಕೂಡಿ ತಂದು ಅದನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು ಎಸ್ಎಲ್ಆರ್ಎಂ ಕಾರ್ಯಕರ್ತರು ಮೂಲ ಉದ್ದೇಶವಾಗಿದೆ. ತನ್ಮೂಲಕ ಪರಿಸರ ಕಾಪಾಡುವ ಮೂಲ ಮಂತ್ರ ಅವರದಾಗಿದೆ. ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಅವುಗಳನ್ನು ಜಿಲ್ಲಾ ಪಂಚಾಯತ್ ಗುರುತಿಸಿದ ಡೀಲರ್ಗಳಿಗೆ ಮಾರಾಟಮಾಡಿ ಅದರಿಂದ ಸಂಗ್ರಹವಾಗುವ ಹಣ ಹಾಗೂ ವಾಣಿಜ್ಯ ಕೇಂದ್ರ ಹಾಗೂ ಮನೆಗಳಿಗೆ ಗ್ರಾಮ ಪಂಚಾಯತ್ ವಿಧಿಸಿದ ತಿಂಗಳ ಶುಲ್ಕವನ್ನು ಸಂಗ್ರಹಿಸಿ ಅದನ್ನು ಘಟಕದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರು ಗೌರವಧನವಾಗಿ ಸ್ವೀಕರಿಸುತ್ತಿದ್ದಾರೆ. ಇವರಿಗೆ ಯಾವುದೇ ಆರೋಗ್ಯ ಭದ್ರತೆ ಇರುವುದಿಲ್ಲ. ಕೋವಿಡ್ ಸಮಯದಲ್ಲೂ ಯಾವುದೇ ಪರಿಹಾರವನ್ನು ಸರಕಾರ ಘೋಷಿಸದೇ ಇರುವುದು ಮಾತ್ರ ವಿಪರ್ಯಾಸ.
ಎಸ್ಎಲ್ಆರ್ಎಂ ಕಾರ್ಯಕರ್ತರು ಸರ್ವ ಋತು ಕಾಲದಲ್ಲಿ ಮಳೆ, ಚಳಿ, ಸೂರ್ಯನ ತಾಪಾಮಾನವನ್ನು ಲೆಕ್ಕಿಸದೇ ಕಳೆದ ಎರಡು ವರ್ಷಗಳಲ್ಲಿ ಎದುರಾದ ಕೊರೊನಾ ಸಂಕಷ್ಟದ ದಿನಗಳಲ್ಲಿ ತಮ್ಮ ನಿಷ್ಟೆಯನ್ನು ಚಾಚು ತಪ್ಪದೇ ಪರಿಪಾಲನೆ ಮಾಡುತ್ತಿದ್ದಾರೆ. ಬೆಳಿಗ್ಗೆ 8.30 ರಿಂದ ಸಂಜೆ 5.30 ವರೆಗೆ ನಿರಂತರವಾಗಿದೆ ತಮ್ಮ ಕೆಲಸ ಕಾರ್ಯಗಳನ್ನು ತೊಡಗಿಸಿಕೊಂಡು ಬಂದಿದ್ದಾರೆ. ಯಾವುದೇ ಜಾತಿ,ಧರ್ಮ,ಭಾಷೆಯ ತಾರತಮ್ಯ ಇವರಲ್ಲಿ ಇಲ್ಲ. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಇವರಲ್ಲಿ ಅನಕ್ಷರಸ್ತರಿಂದ ಹಿಡಿದು ಪದವಿದಾರರ ವರೆಗೆ ಇರುವುದು ಗಮನಿಸಲೇ ಬೇಕು.