ಉಡುಪಿ, ಜೂ. 13 (DaijiworldNews/HR): ಲಾಕ್ಡೌನ್ ಜಾರಿಯಿಂದ ಸರಕಾರ ಕೃಷಿ ಚಟುವಟಿಕೆಗೆ ಯಾವುದೇ ನಿಬಂಧನೆಗಳನ್ನು ಹಾಕಿಲ್ಲ. ಅದರಂತೆ ಕಳೆದ ಒಂದುವರೆ ತಿಂಗಳಿಂದ ಉಡುಪಿಯ ಶಾಸಕ ಕೆ ರಘುಪತಿ ಭಟ್ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಆಂದೋಲನವನ್ನು ಬಹಳ ಸಕ್ರಿಯವಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾಡುತ್ತ ಬಂದಿದ್ದಾರೆ. ಉತ್ತಮ ಪ್ರಶಂಸೆಯೂ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಶನಿವಾರ ಕೆಮ್ಮಣ್ಣು ಪಡುತೋನ್ಸೆ ಯಾಳಕೆರೆ ಮನೆ ಬಳಿ 15 ಎಕರೆ ಹಡಿಲು ಭೂಮಿ ನಾಟಿಗೆ ಚಾಲನೆ ಕಾರ್ಯಕ್ರಮದಲ್ಲಿ ಒಟ್ಟಾಗಿರುವ ಜನರ ಪೋಟೋ, ವಿಡಿಯೋಗಳಿಗೆ ಸಾಮಾಜಿಕ ಜಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಯಾವ ಅಂತರವೂ ಇಲ್ಲ, ಕೊರೊನಾ ಹರಡುವ ಭಯ ಇಲ್ಲವೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಎಲ್ಲರೂ ಮಾಸ್ಕ್ ಹಾಕಿದ್ದು ಬಿಟ್ಟರೆ ಭಾಗವಹಿಸಿದ್ದು ಬಿಟ್ಟರೆ ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟ.
ಅದರಲ್ಲು ಮುಖ್ಯವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ ,ಸಮಾಜಕ್ಕೆ ಮಾರ್ಗದರ್ಶಕರಾಗಬೇಕಿದ್ದ ಸೋದೆ ಮಠದ ಶ್ರೀ ವಿಶ್ವವಲ್ಲಭ ಶ್ರೀಪಾದರು ಯಾವುದೇ ಕೊರೊನಾ ನಿಯಮವನ್ನು ಪಾಲಿಸದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊರೊನಾ ಸಂದರ್ಭ ಇದನ್ನೆಲ್ಲ ಮಾಡಬಹುದೇ? ಜನರ ಮಿತಿ ಇಲ್ಲವೇ? ಸಾಮಾಜಿಕ ಅಂತರ ಇಲ್ಲದೆ ಇದನ್ನು ಮಾಡಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಷ್ಟೇ ಅಲ್ಲದೆ, ಬೇರೆ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.
ಮುಖ್ಯವಾಗಿ ಅಷ್ಟೊಂದು ಜನ ನೆರೆದಿರುವ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲಾ ಪಂಚಾಯತ್ ಸಿಇಓ ಡಾ ನವೀನ್ ಭಟ್ ಪಾಲ್ಗೊಂಡಿದ್ದು, ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಇರುವುದು ಎಲ್ಲರ ಕೆಂಗಣ್ಣಗೆ ಗುರಿಯಾಗಿದ್ದಾರೆ. ಬಡವರಿಗೆ ಒಂದು ನೀತಿ ಉಳ್ಳವರಿಗೆ ಇನ್ನೊಂದು ನೀತಿಯನ್ನು ಜಿಲ್ಲಾಡಳಿತ ಅನುಸರಿಸುತ್ತಿದೆ, ಈ ಕಾರ್ಯಕ್ರಮದಲ್ಲಿ ಗರಿಷ್ಠ ಸಂಖ್ಯೆ ಯನ್ನು ಮೀರಿ ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ಯಾರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.