ಮಂಗಳೂರು, ಜೂ.12 (DaijiworldNews/HR): ಕಾರ್ಮೆಲ್ ಗುರುಮಠ ಬಿಕರ್ನಕಟ್ಟ ಇಲ್ಲಿಯ ಮುಖ್ಯಸ್ಥರಾದ ವಂ. ಫಾ. ಚಾರ್ಲ್ಸ್ ಸೆರಾವೊರವರು ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ನೊವೇನ ಪ್ರಾರ್ಥನೆಯ ಹದಿಮೂರನೇ ದಿನದಂದು ಬಲಿಪೂಜೆ ಅರ್ಪಿಸಿ ಪ್ರವಚನ ಮಾಡಿದರು.
ದಾರಿತಪ್ಪಿದ ಜನರ ಮೇಲೆ ದೇವರ ಪ್ರೀತಿ ಮತ್ತು ಕರುಣೆಗಾಗಿ ಪ್ರಾರ್ಥಿಸುವುದು. ಇಂದು ಕಥೋಲಿಕ ಧರ್ಮಸಭೆ ಮಾತೆ ಮೇರಿಯವರ ನಿಷ್ಕಳಂಕ ಹೃದಯವನ್ನು ಗೌರವಿಸುತ್ತದೆ. ಮಾತೆ ಮೇರಿಯವರು ತಮ್ಮ ಜೀವನವನ್ನು ಯೇಸುಸ್ವಾಮಿಯ ಹಿಂಬಾಲಕರಾಗಿ ಮತ್ತು ದೇವರ ಸೇವೆಯಲ್ಲಿ ಸಮರ್ಪಣೆ ಮಾಡಿದವರು. ಇವತ್ತು ಪ್ರಪಂಚದಲ್ಲಿ ಜನರು ತಮ್ಮ ಇಚ್ಛೆಯನ್ನು
ಪ್ರಧಾನವಾಗಿ ಮಾಡಿ ದೇವರಿಂದ ದೂರ ಸರಿಯುವುದನ್ನು ನೋಡುತ್ತೇವೆ. ಇಂಥವರಿಗೆ ನಮ್ಮ ಪ್ರಾರ್ಥನೆಯ ಅಗತ್ಯವಿದೆ. ಸಂತ ಆಂತೋನಿಯವರ ಗೌರವಾರ್ಥ ನೊವೇನ ಪ್ರಾರ್ಥನೆ ಮಾಡುವಾಗ ತಮ್ಮ ತಪ್ಪು ನಿರ್ಧಾರ ಮತ್ತು ಜೀವನ ಶೈಲಿಯಿಂದ ದೇವರಿಂದ ದೂರ ಸರಿದವರಿಗೆ ದೇವರ ಕರುಣೆಯನ್ನು ಪ್ರಾಥಿಸುವ ಎಂದು ಫಾ. ಸೆರಾವೊರವರು ಕರೆ ನೀಡದರು.
ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್ ಡಿಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.
ಜೂನ್ 13 ಸಂತ ಆಂತೋನಿಯವರ ವಾರ್ಷಿಕ ಹಬ್ಬ. ಮುಂಜಾನೆ 6 ಗಂಟೆಗೆ ಕೊಂಕಣಿ ಮತ್ತು ಸಾಯಾಂಕಾಲ 4 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ನಡೆಯಲಿದ್ದು, ಸಾಯಾಂಕಾಲ 6 ಗಂಟೆಗೆ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಸಾಂಭ್ರಮಿಕ ಬಲಿಪೂಜೆ ನಡೆಸಿಕೊಡುವರು. ಲಾಕ್ಡೌನ್ ಕಾರಣ ಜನರಿಗೆ ಹಬ್ಬದ ಬಲಿಪೂಜೆಯಲ್ಲಿ ಪಾಲ್ಗೊಳ್ಳಲು ಆಗದ ಕಾರಣ ಈ
ಬಲಿಪೂಜೆಗಳನ್ನು ನೇರ ಪ್ರಸಾರ ಮಾಡಲಾಗುವುದು.
ಇನ್ನು ಹಬ್ಬದ ಸಮಯದಲ್ಲಿ ಯುನೈಟೆಡ್ ಕ್ಯಾಥೊಲಿಕ್ಸ್ ಫೇಸ್ ಬುಕ್ ಪೇಜ್ನವರು ಸಂತ ಆಂತೋನಿಯವರ ಜೀವನದ ಮೇಲೆ ಕ್ವಿಜ್ ಸ್ಪರ್ದೆ ಏರ್ಪಡಿಸಿತ್ತು. ಸರಿಯಾದ ಉತ್ತರಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಹಾಗೂ ಹತ್ತು ಸಮಾಧಾನಕರ ಬಹುಮಾನಗಳನ್ನು ಧರ್ಮಾಧ್ಯಕ್ಷರು ಅದೃಷ್ಟ ಚೀಟಿ ಎತ್ತುವ ಮೂಲಕ ಪ್ರಕಟಿಸುವರು. ವಿಜೇತರು ಬಹುಮಾನವನ್ನು ಸೆಪ್ಟೆಂಬರ್
ತಿಂಗಳ 8ನೇ ತಾರೀಕಿನ ತನಕ ಸಂಸ್ಥೆಯ ಕಛೇರಿಯಿಂದ ಪಡೆದುಕೊಳ್ಳುವ ಅವಕಾಶ ಇರುತ್ತದೆ. ಬಲಿಪೂಜೆಯ ಕೊನೆಗೆ ಆಶ್ರಮದ ಮೈದಾನದಲ್ಲಿ ಸಂತ ಆಂತೋನಿಯವರ ಪ್ರತಿಮೆಯ ಮೆರವಣಿಗೆ ನಡೆಯಲಿದೆ ಎಂದು ತಿಳಿದು ಬಂದಿದೆ.