ಉಡುಪಿ, ಜೂ 12 (DaijiworldNews/MS): ಉಡುಪಿ ಚೈಲ್ಡ್ ಲೈನ್ ವತಿಯಿಂದ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವು ಜಿಲ್ಲಾಪಂಚಾಯತ್ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಅವರು ಜನಜಾಗೃತಿಗಾಗಿ ಈ ಸಂಬಂಧ ಹೊರತಂದ ಪೊಸ್ಟರ್ ನ್ನು ಬಿಡುಗಡೆ ಮಾಡುತ್ತಾ ಪ್ರತಿಯೊಂದು ಗ್ರಾಮದಲ್ಲಿ ಬಾಲಕಾರ್ಮಿಕತ್ವಕ್ಕೆ ಮೂಲಕಾರಣ ಶಾಲೆಯಿಂದ ಹೊರಗುಳಿದ ಮಕ್ಕಳು, ಕೊವಿಡ್ ನಿಂದಾಗಿ ಅಥವಾ ಬೇರೆ ಬೇರೆ ಕಾರಣಗಳಿಂದ ಆಗಿದ್ದು ಅವರನ್ನು ಶಾಲೆಗೆ ಬರುವಂತೆ ಮಾಡುವ ಬಗ್ಗೆ ಸಂಬಂದ ಪಟ್ಟ ಎಲ್ಲರೂ ಪ್ರಯತ್ನಿಸಬೇಕೆಂದು ತಿಳಿಸಿದರು. ಈ ಬಗ್ಗೆ ಈಗಾಗಲೇ ಸರ್ವೆ ಮಾಡಲು ಗ್ರಾಮ ಶಿಕ್ಷಣ ಸಮಿತಿಗೆ ತಿಳಿಸಿದ್ದು ಅದರ ವರದಿಯ ಅನುಸಾರ ಕ್ರಿಯಾ ಯೋಜನೆ ರೂಪಿಸಿ ಬಾಲಕಾರ್ಮಿಕ ಮುಕ್ತ ಗ್ರಾಮಗಳಾಗುವಂತೆ ಮಾಡುವಲ್ಲಿ ಎಲ್ಲರ ಸಹಬಾಗಿತ್ವವನ್ನು ಕೋರಿದರು.
ಹಾಜರಿದ್ದ ಎಲ್ಲಾ ಬಾಗಿದಾರರಿಗೆ ಬಾಲಕಾರ್ಮಿಕ ಕೊನೆಗಾಣಿಸುವಲ್ಲಿ ಅವರ ಬಾಧ್ಯತೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಕಾವೇರಿ ಅವರು ಸಾರ್ವಜನಿಕರು ಯಾವುದೇ ಮಗು ಎಲ್ಲೇ ಬಾಲಕಾರ್ಮಿಕ ನಾಗಿ ದುಡಿಯುತ್ತಿರುವದನ್ನು ಕಂಡಲ್ಲಿ ಕೂಡಲೆ 1098 ಚೈಲ್ಡ್ ಲೈನ್ ಗೆ ಕರೆ ಮಾಡಿ ತಿಳಿಸಿದಲ್ಲಿ ಅ ಮಗುವನ್ನು ಅದರಿಂದ ಮುಕ್ತಿಗೊಳಿಸಲು ಸಹಾಯವಾಗುತ್ತದೆಂದು ತಿಳಿಸಿದರು.
ಎಲ್ಲರ ಸಹಕಾರದಿಂದ ಉಡುಪಿಯು ಬಾಲಕಾರ್ಮಿಕ ಮುಕ್ತ ಜಿಲ್ಲೆ ಆಗಲೆಂದು ಆಶಿಸಿದರು. ಪ್ರಾರಂಬದಲ್ಲಿ ಚೈಲ್ಡ್ ಲೈನ್ ನಿರ್ದೇಶಕ ಶ್ರೀ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ ಈ ದಿನದ ಮಹತ್ವವನ್ನು ತಿಳಿಸಿದರು ಮತ್ತು ಜಿಲ್ಲಾಪಂಚಾಯತ್ ಸಹಯೋಗ ದೊಂದಿಗೆ ಬಾಲಕಾರ್ಮಿಕ ಮುಕ್ತ ಗ್ರಾಮಗಳನ್ನು ಗುರುತಿಸಿ ಗೌರವಿಸಲಾಗುವುದೆಂದು ಘೋಷಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ವರ್ಗವಾಗಿ ತೆರಳಲಿರುವ ಶ್ರೀಮತಿ ಕಾವೇರಿ ಯವರನ್ನು ಚೈಲ್ಡ್ ಲೈನ್ ವತಿಯಿಂದ ಅಭಿನಂದಿಸಲಾಯುತು. ಈ ಕಾರ್ಯಕ್ರಮ ದಲ್ಲಿ ಮಾಜಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶ್ರೀ ನಾರಾಯಣ ಬಿ.ಕೆ., ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಶ್ರೀ ವರ್ಣೇಕರ್, ಕಾರ್ಮಿಕ ನಿರೀಕ್ಷಕ ಶ್ರೀ ಪ್ರವೀಣ್, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಶ್ರೀ ಪ್ರಭಾಕರ ಆಚಾರ್, ಚೈಲ್ಡ್ ಲೈನ್ ಸಹನಿರ್ದೇಶಕ ಶ್ರೀ ಗುರುರಾಜ. ಭಟ್, ಸಂಯೋಜಕಿ ಕು.ಕಸ್ತೂರಿ ಮತ್ತು ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು