ಕುಂದಾಪುರ, ಜೂ 12 (DaijiworldNews/PY): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡ 100 ನಾಟೌಟ್ ಅಭಿಯಾನದ ಅಂಗವಾಗಿ ಕುಂದಾಪುರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಿತು.
ಪೆಟ್ರೋಲ್ ಬೆಲೆ ಲೀಟರ್ಗೆ ನೂರು ರೂ.ಗೆ ತಲುಪಿದನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಇಲ್ಲಿನ ಸರಕಾರಿ ಆಸ್ಪತ್ರೆ ಬಳಿಯ ಎಚ್ಪಿ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಮುಖಂಡರು ತಟ್ಟೆ- ಸೌಟು ಬಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು, "ಕಳೆದ ಬಾರಿಯ ಕೊರೊನಾ ಸಂದರ್ಭದಲ್ಲಿ 14 ರೂ. ತೆರಿಗೆ ಏರಿಸಿದ್ದಾರೆ. ಇದನ್ನಾದರೂ ಇಳಿಸಿದರೆ 1 ಲಿ. ಪೆಟ್ರೋಲ್ ದರ ಕಡಿಮೆಯಾಗಲಿದೆ. ಈ ಬಿಜೆಪಿ ಸರಕಾರಕ್ಕೆ ಯಾವುದೇ ಬದ್ಧತೆ, ಸೌಜನ್ಯವಿಲ್ಲ. ಈ ಸರಕಾರವನ್ನು ಅಧಿಕಾರದಿಂದ ಕೆಳಗಿಸಬೇಕು" ಎಂದು ಒತ್ತಾಯಿಸಿದರು.
"ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಇತರೆ ಅಗತ್ಯ ವಸ್ತುಗಳ ದರವೂ ಏರುತ್ತದೆ. ಇದರ ನೇರ ಪರಿಣಾಮ ಸಾಮಾನ್ಯ ಜನರ ಮೇಲಾಗುತ್ತದೆ. ಬೆಲೆ ಇಳಿಸುವ ಅವಕಾಶವಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಗಮನಹರಿಸುತ್ತಿಲ್ಲ. ಇದು ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಜನರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕಾಂಗ್ರೆಸ್ ಜಿ.ಪಂ. ಮಟ್ಟ, ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ" ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿದರು.
ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ್ ಖಾರ್ವಿ, ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ವಿನೋದ್ ಕ್ರಾಸ್ತ, ಉಪಾಧ್ಯಕ್ಷ ಅಶೋಕ್ ಪೂಜಾರಿ, ಪ್ರಮುಖರಾದ ಚಂದ್ರಶೇಖರ್ ಶೆಟ್ಟಿ, ಗಣೇಶ್ ಶೇರಿಗಾರ್, ರೋಶನ್ ಶೆಟ್ಟಿ, ಹಾರೂನ್ ಸಾಹೇಬ್, ಚಂದ್ರ ಅಮೀನ್, ಕುಮಾರ ಖಾರ್ವಿ, ನಾರಾಯಣ ಆಚಾರಿ, ಆಶಾ ಕರ್ವಾಲೋ, ಅಶ್ವತ್ ಕುಮಾರ್, ಸುವರ್ಣ ಅಲ್ಮೇಡಾ, ಅಶೋಕ ಸುವರ್ಣ, ಸುನೀಲ್ ಪೂಜಾರಿ, ರಮೇಶ್ ಶೆಟ್ಟಿ, ಶಿವ ಕುಮಾರ್, ಧರ್ಮ ಪ್ರಕಾಶ್, ಶಶಿರಾಜ್, ಡೊಲ್ಸಿ ಡಿಕೋಸ್ಟಾ, ಸುರೇಶ್ ಕೆ., ಪ್ರಭಾಕರ್ ಕಡ್ಗಿಮನೆ, ಜಯಕರ ಶೆಟ್ಟಿ, ಪ್ರಭಾಕರ, ಶಶಿ ಕುಮಾರ್, ರಾಘವೇಂದ್ರ ಮತ್ತಿತರರಿದ್ದರು.