ಮಂಗಳೂರು, ಜೂ 12 (DaijiworldNews/MS): ಕಿಲ್ಲರ್ ಕೊರೊನಾದಿಂದ ಸಂಕಷ್ಟದಲ್ಲಿರುವ ಕಲಾವಿದರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು.ತುಳು ಕಲಾವಿದರ ಒಕ್ಕೂಟ.ಯಕ್ಷದ್ರುವ ಪಟ್ಲ ಫೌಂಡೇಶನ್ ಮತ್ತು ಲಯನ್ ಕ್ಲಬ್ ಜಂಟಿಯಾಗಿ ನಗರದ ಕದ್ರಿ ಗೋಕುಲ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಕಿಟ್ ಹಂಚಿಕೆ ಮಾಡಲಾಯಿತು.
ಈ ವೇಳೆ ಮಾತಾಡಿದ ಕಮಿಷನರ್ ಶಶಿಕುಮಾರ್ ಅವರು, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಎನ್ನುವಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಇಲ್ಲಿನ ಕಲಾಪೋಷಕರು ಕೂಡ ಕಲಾವಿದರ ಜೊತೆಯಲ್ಲಿದ್ದಾರೆ. ಇದೊಂದು ಮಹಾಮಾರಿಯ ಸಂದರ್ಭದಲ್ಲಿ ನಾವು ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಂಘರ್ಷವಾಗಿದೆ. ನಮ್ಮ ಸ್ನೇಹಿತರು, ಬಂಧುಗಳನ್ನು ಕಳೆದುಕೊಂಡಿದ್ದೇವೆ. ದಿನಗೂಲಿ ಕಾರ್ಮಿಕರು, ಸಣ್ಣ ಸಣ್ಣ ಕೆಲಸ ಮಾಡುವವರು, ಕಲಾವಿದರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಶಿಕ್ಷಣ ಸಂಸ್ಥೆಗಳು ಭಾರೀ ಹಿನ್ನಡೆಯನ್ನು ಅನುಭವಿಸಿವೆ. ಎಲ್ಲರೂ ಸಂತೋಷವಾಗಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಈಗ ಎಲ್ಲರೂ ದುಃಖದಲ್ಲಿದ್ದಾಗ ಕಲಾವಿದರು ಮಾಡುವುದಾದರೂ ಏನು? ಕೊರೋನಾ ಮಹಾಮಾರಿಯ ಈ ಸಂದರ್ಭದಲ್ಲಿ ಇಂತಹ ಕಲಾವಿದರನ್ನು ರಕ್ಷಿಸುವ ಸಂಘಟನೆಗಳು ಇನ್ನಷ್ಟು ಬೆಳೆಯಬೇಕು. ಜಾತಿ ಧರ್ಮ ರಾಜಕೀಯ ಬಿಟ್ಟು ಮನುಷ್ಯತ್ವಕ್ಕೆ ಬೆಲೆ ಸಿಗುವ ಸಮಯ ಇದು. ಹೀಗಾಗಿ ಸಾಮರ್ಥ್ಯ ಇದ್ದವರು ಇಲ್ಲದವರಿಗೆ ತಮ್ಮಿಂದಾದ ಸಹಾಯ ಮಾಡಿಕೊಂಡು ಬನ್ನಿ. ಇದು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನು ಕಾಯುತ್ತದೆ" ಎಂದು ಹೇಳಿದರು.
ಪ್ರಸ್ತಾವಿಕ ಮಾತಾಡಿದ ಹಿರಿಯ ರಂಗಕರ್ಮಿ ಲಕ್ಷ್ಮಣ ಕುಮಾರ್ ಮಲ್ಲೂರು ಅವರು, "ಯಕ್ಷಗಾನ ಕಲಾವಿದರು ಹಿಂದೆ ಬಹಳಷ್ಟು ಸಂಕಷ್ಟದಲ್ಲಿದ್ದರು. ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನವಿಲ್ಲದೆ ಕಲಾವಿದರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದರು. ಈ ವೇಳೆ ಪಟ್ಲ ಫೌಂಡೇಶನ್ ಸ್ಥಾಪನೆ ಮಾಡುವ ಮೂಲಕ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರಿಗೆ ಬೆನ್ನೆಲುಬಾಗಿ ನಿಂತರು. ಈಗ ಯಕ್ಷಗಾನ, ನಾಟಕ ಕಲಾವಿದರು ನೆಮ್ಮದಿಯಿಂದ ಇರಬೇಕಾದರೆ ಪಟ್ಲ ಫೌಂಡೇಶನ್ ಕಾರಣ. ಕಳೆದ ಬಾರಿ ಲಾಕ್ ಡೌನ್ ನಲ್ಲೂ ಸುಮಾರು 300 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದು ಈ ಬಾರಿ ಮತ್ತೆ ಅದನ್ನು ಇತರ ಸಂಘಟನೆಗಳ ಸಹಯೋಗದಲ್ಲಿ ಮುಂದುವರಿದಿದೆ" ಎಂದರು.
ಮಂಗಳೂರು ಕಮಿಷನರ್ ಶಶಿಕುಮಾರ್, ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಲಯನ್ ವಸಂತ ಶೆಟ್ಟಿ, ಗೋಕುಲ್ ಕದ್ರಿ, ಗೋವರ್ಧನ್ ಶೆಟ್ಟಿ, ಪ್ರದೀಪ್ ಆಳ್ವ, ತಾರಾನಾಥ್ ಶೆಟ್ಟಿ ಬೋಳಾರ, ಲಕ್ಷ್ಮಣ ಕುಮಾರ್ ಮಲ್ಲೂರು, ಕ್ಯಾಟ್ಕಾ ಅಧ್ಯಕ್ಷ ಮೋಹನ್ ಕೊಪ್ಪಲ, ಜಗನ್ನಾಥ ಶೆಟ್ಟಿ ಬಾಳ, ಕದ್ರಿ ನವನೀತ್ ಶೆಟ್ಟಿ, ಲಯನ್ ಕಿಶೋರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.