ಕಾರ್ಕಳ, ಜೂ 12 (DaijiworldNews/PY): ಎಐಸಿಸಿ ನಿರ್ದೇಶನದಂತೆ ಕೆಪಿಸಿಸಿ ಮಾರ್ಗದರ್ಶನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ನಗರ ವ್ಯಾಪ್ತಿಯ ಪೆಟ್ರೋಲ್ ಬಂಕ್ ಎದುರುಗಡೆ ಪೆಟ್ರೋಲ್ ಬೆಲೆ 100 ನಾಟೌಟ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಈ ಸಂದರ್ಭ ಮಾತಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ, "ಕಳೆದ 6 ವರ್ಷಗಳಲ್ಲಿ ಮೋದಿ ಸರಕಾರ ಪೆಟ್ರೋಲ್ ಬೆಲೆಯನ್ನು ಶೇ. 300 ರಷ್ಟು ಏರಿಕೆ ಮಾಡಿದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಏರಿಕೆಯ ಕಾರಣ ನೀಡುತ್ತಿದೆ. ವಾಸ್ತವದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ 1 ಬ್ಯಾರಲಿಗೆ ಅಂದರೆ 159 ಲೀಟರಿಗೆ 72.48 ಡಾಲರ್ ಅಂದರೆ ಸುಮಾರು 5286.13 ರೂ. ಆಗಿದ್ದು, ಭಾರತದಲ್ಲಿ 1 ಲೀಟರ್ ಪೆಟ್ರೋಲ್ನ ಬೆಲೆ ಕೇವಲ 33.73 ರೂ. ಆಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರ ಅವೈಜ್ಞಾನಿಕ ರೀತಿಯ ಒಟ್ಟು ಶೇ. 64ರಷ್ಟು ತೆರಿಗೆಯ ಕಾರಣವಾಗಿ ಇಂದು ಪೆಟ್ರೋಲ್ 100 ರೂ. ಗಡಿ ದಾಟಿದ್ದು ಇನ್ನು ಕೇಲವೇ ದಿನಗಳಲ್ಲಿ ಡೀಸೆಲ್ ಬೆಲೆಯೂ ನೂರರ ಗಡಿದಾಟಲಿದೆ" ಎಂದು ಹೇಳಿದರು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪ್ರಸ್ತಾವನೆ ಗೈದು ಮಾತನಾಡಿ, "ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಜನ ವಿರೋಧಿ ನೀತಿಯ ವಿರುದ್ದ ಕಾಂಗ್ರೆಸ್ ವತಿಯಿಂದ ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯಲಿವೆ" ಎಂದರು.
ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಸಿರಿಯಣ್ಣ ಶೆಟ್ಟಿ, ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಉದಯ ಶೆಟ್ಟಿ, ಪ್ರಭಾಕರ ಬಂಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ ಇನ್ನಾ, ತಾಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಸುಬೀತ್, ಸದಸ್ಯರಾದ ಪ್ರತಿಮಾ, ರೆಹಮತ್ ಶೇಖ್, ಹರೀಶ್ ಕುಮಾರ್, ಮಾಜಿ ಪುರಸಭಾ ಸದಸ್ಯರಾದ ವಿವೇಕಾನಂದ ಶೆಣೈ, ನವೀನ್ ದೇವಾಡಿಗ, ರಾಜೇಂದ್ರ ಕುಮಾರ್, ಸುಶಾಂತ್ ಸುಧಾಕರ್, ಸುನೀಲ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.