ಮಂಗಳೂರು, ಜೂ 12 (DaijiworldNews/MS): ರಾಜ್ಯ ಕರಾವಳಿ ಭಾಗದಲ್ಲಿ ಇಂದು ಗುಡುಗು ಸಿಡಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಶನಿವಾರದಿಂದ ಮುಂದಿನ ನಾಲ್ಕು ದಿನಗಳ ಕಾಲ ದ.ಕ ಜಿಲ್ಲೆಯಲ್ಲಿ ಹವಾಮಾನ ಇಲಾಖೆಯೂ ಆರೆಂಜ್ ಅಲರ್ಟ್ ಘೋಷಿಸಿದೆ. ಜೂನ್ 12ರಂದು ಬೆಳಗ್ಗೆ 8.30ರಿಂದ ಜೂನ್ 16ರಂದು ಬೆಳಗ್ಗೆ 8.30ರವರೆಗೆ ’ಆರೆಂಜ್ ಅಲರ್ಟ್’ ಇರಲಿದೆ.
ದಕ್ಷಿಣ ಕನ್ನಡ ಮಾತ್ರವಲ್ಲದೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಇಂದು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ಹೇಳಿದೆ . ಅಲ್ಲದೆ ಬೆಳಗ್ಗಿನ ವೇಳೆಯಲ್ಲಿ ಸಿಡಿಲು ಗುಡುಗು ಸಹಿತ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ಸೂಚನೆ ನೀಡಿದೆ.
ದ.ಕ ಜಿಲ್ಲೆಯಲ್ಲಿ ಸುಮಾರು 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇನ್ನು ಶುಕ್ರವಾರ ದ.ಕ ಜಿಲ್ಲೆಯ ಬೆಳ್ತಂಗಡಿಯಲ್ಲಿ 19.9 ಮಿ.ಮೀ., ಬಂಟ್ವಾಳ 35.6, ಮಂಗಳೂರು 30.9, ಪುತ್ತೂರು 36.3, ಸುಳ್ಯ 25.5, ಮೂಡುಬಿದಿರೆ 19.1, ಕಡಬದಲ್ಲಿ 23.5 ಮಿ.ಮೀ. ಸಹಿತ ಸರಾಸರಿ 27.2 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.