ಕಾಸರಗೋಡು, ಜೂ. 11 (DaijiworldNews/SM): ನಾಮಪತ್ರ ಹಿಂತೆಗೆಯಲು ಬಿಜೆಪಿ ಹಣ ನೀಡಿತ್ತು ಎಂಬ ಮಂಜೇಶ್ವರದ ಬಿ ಎಸ್ಪಿ ಅಭ್ಯ ರ್ಥಿಯಾಗಿದ್ದ ಕೆ. ಸುಂದರವರ ಹೇಳಿಕೆ ಹಿನ್ನಲೆಯಲ್ಲಿ ಕ್ರೈಂ ಬ್ರಾಂಚ್ ತನಿಖೆ ಚುರುಕುಗೊಳಿಸಿದೆ. ಹಣದ ಜೊತೆಗೆ ಸುಂದರರವರಿಗೆ ನೀಡಲಾಗಿದೆ ಎನ್ನಲಾದ ಸ್ಮಾರ್ಟ್ ಫೋನನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ.
ಸುಂದರರವರ ತಾಯಿಯಿಂದಲೂ ಮಾಹಿತಿ ಕಲೆ ಹಾಕಿದ್ದು, ಬಿಜೆಪಿ ಮುಖಂಡರು ಹಣ ನೀಡಿರುವ ಬಗ್ಗೆ ಹೇಳಿಕೆ ನೀಡಿರುವುದಾಗಿ ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ವಾಣಿನಗರದ ಸಂಬಂಧಿಕರ ಮನೆಯಲ್ಲಿರುವ ಸುಂದರರವರಿಂದ ತನಿಖಾ ತಂಡದ ಮುಖ್ಯಸ್ಥ ಎ. ಸತೀಶ್ ಕುಮಾರ್ ನೇತೃತ್ವದ ತಂಡವು ಮಾಹಿತಿ ಕಲೆ ಹಾಕಿತು. ಮೊಬೈಲ್ ಖರೀದಿಸಿದ ನೀರ್ಚಾಲ್ ನ ಅಂಗಡಿಗೆ ತೆರಳಿ ಮಾಹಿತಿಯನ್ನು ಪಡೆದಿದೆ. ಮೊಬೈಲ್ ನ್ನು ಸೈಬರ್ ಸೆಲ್ ತಪಾಸಣೆಗೆ ಒಳಪಡಿಸಲಾಗಿದ್ದು ಹಲವು ಮಾಹಿತಿಗಳು ಈ ಮೊಬೈಲ್ ನಿಂದ ಲಭಿಸಿದೆ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ಸ್ಥಳೀಯ ಮೂವರು ಮುಖಂಡರ ವಿರುದ್ಧ ಶೀಘ್ರ ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಿಂದ ಸ್ಪರ್ಧಿಸಿದ್ಧ ಕೆ. ಸುಂದರರವರಿಗೆ ನಾಮಪತ್ರ ಹಿಂತೆಗೆಯಲು ಎರಡೂವರೆ ಲಕ್ಷ ರೂ, ಸ್ಮಾರ್ಟ್ ಫೋನ್ ಅಲ್ಲದೆ ಸುರೇಂದ್ರನ್ ಗೆದ್ದಲ್ಲಿ ಹೊಸ ಮನೆ, ಮಂಗಳೂರಿನಲ್ಲಿ ವೈನ್ ಶಾಪ್ ಪರವಾನಿಗೆ ಆಮಿಷವೊಡ್ಡಲಾಗಿತ್ತು. ಚುನಾವಣೆ ಕಳೆದು ಎರಡು ತಿಂಗಳ ಬಳಿಕ ಕೆ. ಸುಂದರ ಈ ವಿಷಯವನ್ನು ಹೊರ ಹಾಕಿದ್ದು, ರಾಷ್ಟ್ರಮಟ್ಟದಲ್ಲೇ ಬಿಜೆಪಿಗೆ ಕಳಂಕ ತಂದ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.