ಉಡುಪಿ, ಜೂ.11 (DaijiworldNews/HR): ಯೆಡಮೊಗೆ ಪಂಚಾಯತ್ನ ಬಿಜೆಪಿ ಬೆಂಬಲಿತ ಅಧ್ಯಕ್ಷ ಪ್ರಾಣೇಶ ಯಡಿಯಾಳ್ ಮಾಡಿರುವ ಕೃತ್ಯವನ್ನು ಖಂಡಿಸಿ, ಈ ವಿಚಾರದಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ನ್ಯಾಯ ತಿರ್ಮಾನ ಆಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಬಲಿಯಾದವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕು, ಯಾವೊಬ್ಬ ತಪ್ಪಿತಸ್ಥನೂ ಕೂಡ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡಬಾರದು, ಎಂದು ಕಾಪು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಹಿಂದೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ರಾಜಕೀಯ ಪ್ರತಿನಿದಿಗಳು ಕಾಂಗ್ರೆಸ್ ಸರಕಾರ ಕೊಲೆ ಮಾಡಲು ಪ್ರಚೋದಿಸುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಜಿಲ್ಲೆಯಲ್ಲಿ ನಡೆದ ಮೂರು ಕೃತ್ಯದಲ್ಲಿ ಬಿಜೆಪಿ ಕಾರ್ಯಕರ್ತರೇ ಕೊಲೆಯಲ್ಲಿ ಭಾಗಿಯಾಗಿರುವುದು ಖಂಡನೀಯ. ಪ್ರವೀಣ್ ಪೂಜಾರಿಯ ಕೊಲೆ, ಕೋಟದಲ್ಲಿ ನಡೆದ ಅವಳಿ ಕೊಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನೇ ಪ್ರಥಮ ಆರೋಪಿ, ಮೊನ್ನೆ ಯೆಡಮೊಗೆಯಲ್ಲಿ ನಡೆದ ಘಟನೆಯಲ್ಲೂ ಬಿಜೆಪಿ ಕಾರ್ಯಕರ್ತನೇ ಆರೋಪಿ. ಬಿಜೆಪಿ ಸುಮ್ಮನೆ ಕಾಂಗ್ರೆಸ್ ಮೇಲೆ ಅಪವಾದ ಹೊರಿಸಿತ್ತು. ಈಗ ಬಿಜೆಪಿಯವರು ಅವರ ಪಕ್ಷದವರನ್ನು ಕೊಲೆ ಮಾಡುತ್ತಿರುವುದು ವಿಪರ್ಯಾಸ. ಜಿಲ್ಲೆಯಲ್ಲಿ ಅದೇನೆ ಚಿಕ್ಕ ಪುಟ್ಟ ಘಟನೆಗಳು ನಡೆದರೂ ರಾಜಕೀಯ ಲಾಭ ಪಡೆಯುತ್ತಿದ್ದ ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ ಮತ್ತು ರಾಘವೇಂದ್ರ ಅವರು ಈ ಘಟನೆ ನಡೆದಾಗ ಯಾಕೆ ಬರಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಸರಕಾದ ಅಂಕಿ ಅಂಶದ ಪ್ರಕಾರ ದೇಶದಲ್ಲಿ 3.5 ಲಕ್ಷ ಜನ ಕೊರೊನಾದಿಂದನೇ ಮರಣ ಹೊಂದಿದ್ದಾರೆ ಎಂದು ವರದಿ ಮಾಡಿದೆ. ಆದರೆ ವಾಸ್ತವದಲ್ಲಿ ಎರಡನೇ ಅಲೆ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳದಿರುವುದು ಈ ಸಾವಿಗೆ ಕಾರಣ. ರಾಜ್ಯ ಸರಕಾರದ ನಿರ್ಲಕ್ಷ್ಯ ದಿಂದ ಹೆಣ ಸುಡಲು ಜಾಗವಿಲ್ಲದ ಪರಿಸ್ಥಿತಿ ಎದುರಾಯ್ತು.
ಇನ್ನು ಕೊರೊನಾ ಸಂಕಷ್ಟ ಸಮಯದಲ್ಲಿ ರಾಜ್ಯದೆಲ್ಲೆಡೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆ ಆಗುತ್ತಿದೆ. ಆದರೆ ಅದೆಷ್ಟೋ ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳೇ ಇಲ್ಲ. ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಈಗಿನ ಅನಿವಾರ್ಯತೆ. ಆರೋಗ್ಯ ಇಲಾಖೆಯ ಹಲವು ಹುದ್ದೆಗಳಿಗೆ ನೇಮಕಾತಿಯೇ ಆಗಿಲ್ಲ. ಒಂಧನೇ ಅಲೆಯ ಸಂದರ್ಭದಲ್ಲಿ ಆಸ್ಪತೆಯ ಸೌಲಭ್ಯಗಳಲ್ಲಿ ಏನು ಬದಲಾವಣೆ ಆಗಿಲ್ಲ. ಆಶಾಕಾರ್ಯಕರ್ತರು, ಹೆಲ್ತ್ ವರ್ಕರ್ಸ್ ಗಳ ನೇಮಕಾತಿ ಮಾಡಿಲ್ಲ. ಡಾಕ್ಟರ್ಸ್, ನರ್ಸಸ್ ಸರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಮಹಾಮಾರಿಯನ್ನು ನಿಯಂತ್ರಿಸಬೇಕಾದ ಸಮಯದಲ್ಲಿ ಸಿಎಂ ಬದಲಾವಣೆ, ಎರಡು ಪಂಗಡಗಳ ಬಗ್ಗೆ ಚರ್ಚೆ ಎಷ್ಟು ಸಮಂಜಸ? ಎಷ್ಟರಮಟ್ಟಿಗೆ ಜನರ ಮೇಲೆ ಕಾಳಜಿ ಇದೆ ಎಂದು ಸರಕಾರವನ್ನು ಟೀಕಿಸಿದರು.