ಉಡುಪಿ, ಜೂ 11 (DaijiworldNews/MS): ಪ್ರಧಾನಿ ನರೇಂದ್ರ ಮೋದಿಗೆ ದೇಶದ ಜನ ಜೀವನದ ಮೇಲೆ ಕಾಳಜಿ ಇಲ್ಲದೆ ಕೇವಲ ತಮ್ಮ ಇಮೇಜ್ ಹೆಚ್ಚಿಸುವತ್ತ ಮಾತ್ರ ಆಸಕ್ತಿ ತೋರಿಸುತ್ತಿದ್ದು ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ಯಾವ ಇಚ್ಛಾಶಕ್ತಿ ಅವರಿಗಿಲ್ಲ ಎಂದು ಮಾಜಿ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಟೀಕಿಸಿದರು.
ಅವರು ಇಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, 'ನಾವು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಳ್ಳುವುದು ಆದರೆ ಪ್ರಮಾಣ ಪತ್ರದಲ್ಲಿ ಮೋದಿ ಪೋಟೋ, ಪೊರಕೆ ನಮ್ಮದು, ಸ್ವಚ್ಛ ಮಾಡಿ ಕಸ ಎತ್ತುವುದು ನಾವು, ಆದರೆ ಸ್ವಚ್ಛ ಭಾರತ ಮಿಷನ್ ಎನ್ನುತ್ತಾ ಮೋದಿ ಪೋಟೋ ಹಾಕಿ ಕ್ರೆಡಿಟ್ ತೆಗೆದು ಕೊಳ್ಳುತ್ತಾರೆ. ಇನ್ನು ಮಕ್ಕಳು ಕಲಿಯಲು ಪೋಷಕರೇ ಹಣ ಕೊಟ್ಟು ಶಿಕ್ಷಣ ಕಲಿಸಿದರೆ 'ಬೇಟಿ ಪಡಾವೋ , ಬೇಟಿ ಬಚಾವೋ' ಅಂತ ಫಲಕ ಹಾಕಿ ಅವರೇ ಪ್ರಚಾರ ಗಿಟ್ಟಿಸಿ ಕೊಳ್ಳುತ್ತಾರೆ. ಹೀಗೆ ಮೋದಿ ರಾಜಕಾರಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಹೊರತು ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ಯಾವ ಇಚ್ಛಾಶಕ್ತಿ ಅವರಿಗಿಲ್ಲ ಎಂದರು
ಕೊವೀಡ್ ಸಂಕಷ್ಟ ಸಮಯದಲ್ಲಿ ಬೆಲೆ ಗಗನಕ್ಕೇರುತ್ತಿದೆ. ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಾಂಗ್ರೆಸ್ ಸರಕಾರ ನಡೆಸುತ್ತಿರುವಾಗ ಬೆಲೆ ಏರಿಕೆ ಆದಾಗೆಲ್ಲ ಪ್ರತಿಭಟನೆ ನಡೆಸುತ್ತಿದ್ದರು. ಈಗ ತೈಲ ಬೆಲೆ ರೂ ೧೦೦ ತಲುಪಿದೆ. ಗ್ಯಾಸ್ ಸಿಲಿಂಡರ್ ರೂ ೮೫೦ ಆಗಿದೆ ವಿದ್ಯುತ್ ದರವೂ ಹೆಚ್ಚಾಗಿದೆ. ಈಗ ಯಾಕೆ ಲೋಕಸಭಾ ಸದಸ್ಯರುಗಳು ದ್ವನಿ ಎತ್ತುತ್ತಿಲ್ಲ? ಈಗಲೂ ಕೂಡ ಸರಕಾರ ವಿರುದ್ಧ ಧ್ವನಿ ಎತ್ತಬಹುದಲ್ಲ ಎಂದು ಸೊರಕೆ ಪ್ರಶ್ನಿಸಿದರು.
ರೂ ೨೦,೦೦೦ ಕೋಟಿ ಹಣ ಗಂಗಾ ನದಿ ಶುದ್ದೀಕರಣಕ್ಕೆ ಘೋಷಣೆ ಮಾಡಿದ್ದಾರೆ. ಆದರೆ ಈಗ ಲಸಿಕೆಯ ಕೊರತೆ ಇದೆ. ಇದರಿಂದ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಲಸಿಕೆ ಕೇಂದ್ರೀಕರಣವಾಗುತ್ತಿದೆ. ಡಿಸೆಂಬರ್ ಒಳಗೆ ಎಲ್ಲರೂ ವ್ಯಾಕ್ಸಿನೇಟೆಡ್ ಆಗುತ್ತಾರೆ ಎನ್ನುವ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ಉತ್ಪಾದನೆ ಎಲ್ಲಿದೆ? ಮೂರನೇ ಹಂತದ ಕೋವ್ಯಾಕ್ಸಿನ್ ಪ್ರಯೋಗ ವೇ ಆಗಿಲ್ಲ. ಮೂರನೇ ಅಲೆ ಮಕ್ಕಳಿಗೆ ಪರಿಣಾಮ ಬೀರುತ್ತಿದೆ. ಆದರೆ ಇದನ್ನು ತಡೆಗಟ್ಟಲು ಕೇಂದ್ರ ಏನು ಮುಂಜಾಗ್ರತಾ ಕ್ರಮ ತೆಗೆದು ಕೊಂಡಿದೆ ಎಂದು ಸೊರಕೆ ಬಿಜೆಪಿ ಸರಕಾರವನ್ನು ಪ್ರಶ್ನಿಸಿದರು.