ಉಳ್ಳಾಲ, ಜೂ 11 (DaijiworldNews/MS): ಏಳನೇ ತರಗತಿಯಲ್ಲಿರುವಾಗಲೇ ಶ್ರೀ ಕಟೀಲು ಕ್ಷೇತ್ರ ಮಹಾತ್ಮ್ಯೆ ಎಂಬ ಯಕ್ಷಕಾವ್ಯವನ್ನು ಬರೆದು ಕೀರ್ತಿಗೆ ಪಾತ್ರರಾಗಿರುವ ಖ್ಯಾತ ಯಕ್ಷಗಾನ ಪ್ರಸಂಗಕರ್ತ ದಿ| ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಇವರ ಹೆಸರಿನಲ್ಲಿ ಮೊಮ್ಮಕ್ಕಳು `ನಾರುದಾರು' ಅನ್ನುವ ಹೆಸರನ್ನಿಟ್ಟು ಲಾಕ್ಡೌನ್ ನಡುವೆ ಆರಂಭಿಸಿದ ಮರದ ಕಲಾಕೃತಿಗಳಿಗೆ ಇದೀಗ ಬೇಡಿಕೆಗಳು ವ್ಯಕ್ತವಾಗುತ್ತಿದೆ.
ಮುಲ್ಕಿ ಶಿಮಂತೂರು ದಿ.ನಾರಾಯಣ ಶೆಟ್ಟಿಯವರ ಮೊಮ್ಮಕ್ಕಳಾದ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ತನ್ವಿ , ನಗರದ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಬಿಕಾಂ ವಿದ್ಯಾರ್ಥಿನಿ ಸನ್ನಿಧಿ , ಬೆಂಗಳೂರು ಆರ್. ವಿ ಕಾಲೇಜು ಆರ್ಕಿಟೆಕ್ಚರ್ ವಿದ್ಯಾರ್ಥಿನಿ ಶ್ರೀನಿಧಿ ಸೇರಿಕೊಂಡು `ನಾರುದಾರು' ಹೆಸರಿನೊಂದಿಗೆ ಮರದ ಕಲಾಕೃತಿಗಳನ್ನು ರಚಿನೆ ಮಾಡಿ ಗ್ರಾಹಕರಿಗೂ ನೀಡುತ್ತಿದ್ದಾರೆ.
ಆರಂಭ ಹೇಗಾಯಿತು : ಲಾಕ್ಡೌನ್ ಸಮಯದಲ್ಲಿ ಅಜ್ಜನ ಮನೆಯಲ್ಲಿ ಸೇರಿದ್ದ ಎಲ್ಲರೂ, ತೋಟ, ಗದ್ದೆಯತ್ತಾ ಸುತ್ತಾಡುವ ಸಂದರ್ಭ ಮರಗಳ ಆಕೃತಿಯಲ್ಲಿ ವಿಭಿನ್ನತೆಯನ್ನು ಕಂಡರು. ಮರದಲ್ಲಿಯೂ ಒಂದೊಂದು ರೂಪವಿದೆ ಅನ್ನುವುದರ ಕುರಿತು ಚರ್ಚೆ ಆರಂಭಿಸಿದಾಗ ಮರದ ಕಲಾಕೃತಿಯತ್ತ ಕಲ್ಪನೆ ಹೊಳೆಯಿತು. ಅನುಭವವಿಲ್ಲದಿದ್ದರೂ ಮನೆಯ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಮರದ ಮಿಲ್ ನತ್ತ ತೆರಳಿ ಮರದ ತುಂಡುಗಳನ್ನು ಹಣ ಕೊಟ್ಟು ಖರೀದಿಸಿದರು. ಎರಡು ವಿಧದ ಮರಗಳ ತುಂಡುಗಳನ್ನು ಪಡೆದು ಸಹೋದರರಾದ ಸಿದ್ದಾಂಶ್, ಅಭಿಜಿತ್ ಸಹಾಯ ಪಡೆದು ಆರಂಭದಲ್ಲಿ ಒಣಗಿಸಿ , ಬಳಿಕ ಎರಡೆರಡು ಬಾರಿ ಸೈನ್ ಪೇಪರ್ ಅಳವಡಿಸಿ, ಮಟ್ಟ ಸರಿಯಾಗುವವರೆಗೆ ಒರೆಸಿ , ಪಾಲಿಷ್ ಮಾಡಿ ಅದರ ಮೇಲೆ ಸ್ಪ್ರೇ ಬಳಸಿ ಕಲಾಕೃತಿಯನ್ನು ರಚಿಸಿದರು. ಕೀ ಹೋಲ್ಡರ್ , ನೇಮ್ ಬೋರ್ಡ್, ಡ್ರೀಮ್ ಕ್ಯಾಟ್ಚಸ್ ಮೂರು ವಿಧದಲ್ಲಿ ಕಲಾಕೃತಿಗಳನ್ನು ತಯಾರುಗೊಳಿಸಿದರು. ಹೀಗೆ ಮಾಡಿರುವ ಕಲಾಕೃತಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಬೇಡಿಕೆಗಳು ವ್ಯಕ್ತವಾದವು. ಎರಡು ತಿಂಗಳ ಅವಧಿಯಲ್ಲಿ ತಂಡ ರಚಿಸಿದ 10 ಕಲಾಕೃತಿಗಳಲ್ಲಿ ಐದು ಈಗಾಗಲೇ ಮಾರಾಟವಾಗಿವೆ. ಇನ್ನೂ 5 ರಷ್ಟು ಆರ್ಡರ್ ಗಳಿದ್ದು, ಅದನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರಚಿಸಲಾಗುತ್ತಿದೆ.
'ಅಜ್ಜನ ಮಾತುಗಳೇ ಪ್ರೇರಣೆ'
ಅಜ್ಜ ಎಂದಿಗೂ ಹೆಣ್ಮಕ್ಕಳು ಸ್ವಾವಲಂಬಿಯಾಗಿ ಬದುಕುವಂತಹ ಕತೆಗಳನ್ನೇ ಹೇಳುತ್ತಾ ಪ್ರೇರೇಪಿಸುತ್ತಿದ್ದರು. ಜೀವನದಲ್ಲಿ ಹೆಸರನ್ನು ಉಳಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ಎಂದಿಗೂ ಎಲ್ಲರೂ ಒಗ್ಗಟ್ಟಾಗಿ ಕಾರ್ಯಗಳನ್ನು ಮಾಡಿದಾಗ ಸಫಲತೆ , ಯಶಸ್ಸು ಖಂಡಿತ ಅನ್ನುತ್ತಿದ್ದರು. ಅವರ ಜೀವನದಲ್ಲಿ ಅನೇಕ ಸಾಧನೆಯನ್ನು ಮಾಡಿದವರು ಹಾಗೂ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ಆದರ್ಶಗಳನ್ನು ಪಾಲಿಸಿ ಎಲ್ಲರೂ ಒಗ್ಗಟ್ಟಾಗಿ ಏನಾದರೂ ಮಾಡಬೇಕು ಅನ್ನುವ ಛಲವಿತ್ತು. ಅದರಂತೆ ಕೊರೊನಾ ಲಾಕ್ಡೌನ್ ಸಂದರ್ಭ ಎಲ್ಲರೂ ಜೊತೆ ಸೇರಿದ್ದೇವೆ, ಇದೇ ಸಮಯವನ್ನು ಉಪಯೋಗಿಸಿ ಅಜ್ಜನನ್ನು ಅವರ ಹಿರಿಯರು ಪ್ರೀತಿಯಿಂದ ಕರೆಯುತ್ತಿದ್ದ `ನಾರು' ಹೆಸರಿನ ಜೊತೆಗೆ ದಾರು ಅನ್ನುವ ಸಂಸ್ಕøತಿಯ ಪದವನ್ನಿಟ್ಟು ಕಲಾಕೃತಿಯನ್ನು ಆರಂಭಿಸಿದ್ದೇವೆ. ಬೇಡಿಕೆಗಳು ನಮ್ಮ ಯಶಸ್ಸು, ಮುಂದೆಯೂ ಕಲಾಕೃತಿ ರಚನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ವಿಶ್ವಾಸ ನಮ್ಮದು ಎಂದು ಶ್ರೀನಿಧಿ ಹೇಳುತ್ತಾರೆ.
ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಇದರ ಪೋಸ್ಟಿಂಗ್ ಹಾಕಿದ್ದು, ಹೊರಜಿಲ್ಲೆಯವರು ಕೇಳಿರುವುದರಿಂದ ಕೊರಿಯರ್ ಮುಖೇನ ಕಳುಹಿಸುವ ಚಿಂತನೆ ನಡೆಸುತ್ತಿದ್ದಾರೆ.
ನೇರ ನಡೆ ನುಡಿಯ ನಾರಾಯಣ ಶೆಟ್ಟರು !
ನೇರ ನಡೆನುಡಿಯ ನಾರಾಯಣ ಶೆಟ್ಟರು, ಸತ್ಯ, ಧರ್ಮ, ನ್ಯಾಯದಲ್ಲಿ ಬದುಕಿದವರು. ಅನ್ಯಾಯವನ್ನು ನೇರವಾಗಿ ವಿರೋಧಿಸುತ್ತಿದ್ದ ವ್ಯಕ್ತಿತ್ವದವರು. ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ನಾರಾಯಣ ಶೆಟ್ಟರು 7ನೇ ತರಗತಿಯಲ್ಲಿ ಇರುವಾಗಲೇ ಬರೆದ ಶ್ರೀಕಟೀಲು ಕ್ಷೇತ್ರ ಮಾಹಾತ್ಮ್ಯಂ ಪ್ರಸಂಗ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಅನೇಕ ವರ್ಷಗಳ ಕಾಲ ಶಿಮಂತೂರು ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಛಂದಸ್ಸಿನ ಬಗೆಗೆ ಅಪಾರವಾದ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಿಂದ ಡಿ. ಲಿಟ್. ಪದವಿ ಪಡೆದಿದ್ದರು. ಇದು ಯಕ್ಷಗಾನಕ್ಕೆ ಮಾತ್ರವಲ್ಲ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಕೊಡುಗೆಯಾಗಿತ್ತು. ಯಕ್ಷಗಾನ ಸಾಹಿತ್ಯದಲ್ಲಿ ಅಪಾರ ಜ್ಞಾನ ಗಳಿಸಿದ್ದರು ಅಪಾರ ಶಿಷ್ಯರನ್ನು ಹೊಂದಿದ್ದು ಹತ್ತಾರು ಯಕ್ಷಗಾನ ಪ್ರಸಂಗಕರ್ತರಿಗೆ, ವಿದ್ವಾಂಸರಿಗೆ, ಕಲಾವಿದರಿಗೆ ಗುರುಗಳಾಗಿದ್ದರು. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಥಮ ಸದಸ್ಯರಾಗಿದ್ದರು. ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.