ಕಾರ್ಕಳ, ಜೂ.10 (DaijiworldNews/HR): ಕೊರೊನಾ ಮಹಾಮಾರಿ ಮೂರನೆ ಅಲೆ ತಡೆಗಟ್ಟಲು ಸರ್ವರು ಸನ್ನದ್ಧರಾಗಬೇಕು,ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಆಸ್ಪತ್ರೆ, ವೈದ್ಯರ ನೇಮಕ ಇವೆಲ್ಲ ಸಿದ್ಧತೆಗಳ ಕುರಿತು ಅಧಿಕಾರಿಗಳ ಜತೆ ಪೂರ್ವಭಾವಿ ಸಭೆಯನ್ನು ಈಗಾಗಲೇ ನಡೆಸಿದ್ದು, ಹೆಚ್ಚುವರಿ ತಜ್ಞರು ಮತ್ತು ಮಕ್ಕಳ ತಜ್ಞರ ನೇಮಕಕ್ಕೆ ಸಂಬಂದಿಸಿ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಹಾಘೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಹೇಳಿದ್ದಾರೆ.
ಉದ್ಯಮಿ ಮಹಮ್ಮದ್ ಗೌಸ್ ತಾಲೂಕು ಕಚೇರಿಗೆ ಕೊಡಮಾಡಿದ ಮಾಸ್ಕ್, ಸ್ಯಾನಿಟೈಸರ್ ಮೊದಲಾದ ವೈದ್ಯಕೀಯ ಸಾಮಗ್ರಿಗಳನ್ನು ಪ್ರವಾಸಿ ಮಂದಿರದಲ್ಲಿ ಹಸ್ತಾಂತರಿಸಿ ಮಾತನಾಡಿದ ಅವರು, "ಮೂರನೆ ಸೋಂಕಿನ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಬಗ್ಗೆ ತಜ್ಞರು, ವೈದ್ಯರು ಸೂಚನೆ ನೀಡಿದ್ದಾರೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಎನ್ನುತ್ತಿದ್ದರೂ ಖಚಿತವಾಗಿ ಹೇಳಲು ಅಸಾಧ್ಯ. ಹೆಚ್ಚಿನ ಹಾನಿ ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಬೇಕಾದ ಕ್ರಮ ವಹಿಸಲಾಗಿದೆ"ಎಂದರು.
ಇನ್ನು ಲಸಿಕೆ ವಿತರಣೆಯಲ್ಲಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕು ಮುಂಚೂಣಿಯಲ್ಲಿದ್ದು, ಸೋಂಕು ತಡೆ ವಿರುದ್ಧದ ಸಮರ ಮುಂದುವರೆಯುತ್ತಿದ್ದು ಶೀಘ್ರ ಕೊರೊನಾ ಮುಕ್ತರಾಗಲಿದ್ದೇವೆ" ಎಂದು ಹೇಳಿದ್ದಾರೆ.
ಉದ್ಯಮಿ ಮಹಮ್ಮದ್ ಗೌಸ್ರವರು ಪತ್ರಕರ್ತರ ಸಂಘದ ಸದಸ್ಯರಿಗೆ ಆಕ್ಸಿಮೀಟರ್ರನ್ನು ಇದೇ ಸಂದರ್ಭ ವಿತರಿಸಿ ಪತ್ರಕರ್ತರ ಕಾರ್ಯಸಾಧನೆ ಕೊಂಡಾಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಪ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಆರ್.ಬಿ. ಜಗದೀಶ್, ಜಿಲ್ಲಾ ಸಮಿತಿಯ ಹರಿಪ್ರಸಾದ್ ನಂದಳಿಕೆ, ಕಾರ್ಯದರ್ಶಿ ಕೃಷ್ಣ ಅಜೆಕಾರ್ ಮೊದಲಾದವರು ಉಪಸ್ಥಿತರಿದ್ದರು.