ಉಡುಪಿ, ಜೂ 10 (DaijiworldNews/MS): ಇಂದ್ರಾಳಿಯ ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಅಪರಾಧಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ ಶೆಟ್ಟಿ ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ ಭಟ್ ಎಂಬಾತನಿಗೆ ಜೂ.8 ರ ಮಂಗಳವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ರಾಜೇಶ್ವರಿ ಪುತ್ರ ನವನೀತ್ ಶೆಟ್ಟಿ, ಗೆಳೆಯ ನಿರಂಜನ್ ಭಟ್ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಸಹಿತ ಬಿಗು ಭದ್ರತೆಯಲ್ಲಿ ರಾಜೇಶ್ವರಿ ಶೆಟ್ಟಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಪರಪ್ಪನ ಅಗ್ರಹಾರಕ್ಕೆ ಹಸ್ತಾಂತರಿಸಲಾಗಿದೆ.
14 ದಿನಗಳ ಕ್ವಾರಂಟೈನ್
ಜಿಲ್ಲಾ ನ್ಯಾಯಾಲಯದ ತೀರ್ಪಿನ ಬಳಿಕ ರಾಜೇಶ್ವರಿ ಶೆಟ್ಟಿಯನ್ನು ಕರೆದು ಕೊಂಡು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಆ ಬಳಿಕ ಮಣಿಪಾಲ ಪೊಲೀಸರು, ಮಹಿಳಾ ಠಾಣೆಯ ಎಸ್ ಐ, ಸಶಸ್ತ್ರ ಹೊಂದಿರುವ ಸಿಬಂದಿ ಜತೆ ಜಿಲ್ಲಾ ಸಶಸ್ತ್ರ ವಾಹನದಲ್ಲಿ ರಾಜೇಶ್ವರಿ ಶೆಟ್ಟಿಯನ್ನು ಕರೆದುಕೊಂಡು ಹೋಗಲಾಗಿದೆ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದ್ದು, ಜೈಲರ್ ಅವರಿಗೆ ಹಸ್ತಾಂತರಿಸಲಾಗಿದೆ. ಜೈಲಿನಲ್ಲಿರುವ ಪ್ರತ್ಯೇಕ ಸೆಲ್ ನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಶಿಕ್ಷೆಯಾಗಿರುವ ಸೆಲ್ ನಲ್ಲಿ ಹಾಕಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತೀರ್ಪಿನ ಪ್ರಮುಖ ಅಂಶಗಳು ಈ ರೀತಿ ಇವೆ:
ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷಗಳ ಕಠಿಣ ಸಜೆಗೂ ಆರೋಪಿಗಳು ಅರ್ಹರು ಎಂದಿದೆ.
ಭಾಸ್ಕರ್ ಶೆಟ್ಟಿ ಪತ್ನಿಯಾದ ಮೊದಲನೇ ಆರೋಪಿ ರಾಜೇಶ್ವರಿ ಪುತ್ರನಾದ ಎರಡನೇ ಆರೋಪಿ ಹಾಗೂ ರಾಜೇಶ್ವರಿ ಜೊತೆ ʼಅಸಾಧಾರಣʼ ಸಂಬಂಧ ಹೊಂದಿದ್ದ ಮೂರನೇ ಆರೋಪಿ (ನಿರಂಜನ್ ಭಟ್) ಸೇರಿ ಭಾಸ್ಕರ್ ಅವರ ಕೊಲೆಗೆ ಪಿತೂರಿ ಮತ್ತು ಸಿದ್ಧತೆ ನಡೆಸಿದ್ದರು.
28-07-2016ರಂದು ಮಧ್ಯಾಹ್ನ 3.30ಕ್ಕೆ ಎರ್ಟಿಗಾ ಕಾರಿನಲ್ಲಿ ಭಾಸ್ಕರ್ (ಉಡುಪಿಯ) ಈಶ್ವರಿ ಕಟ್ಟಡದ ತನ್ನ ಮನೆಗೆ ತೆರಳಿದಾಗ ಮೂವರೂ ಸೇರಿ ಅವರನ್ನು ಕೊಂದು ಶವವನ್ನು ಕಾರ್ಕಳ ತಾಲೂಕು ನಂದಳಿಕೆ ಗ್ರಾಮದಲ್ಲಿರುವ ನಿರಂಜನ್ ಭಟ್ ಮನೆಗೆ ಸಾಗಿಸಿದರು. ಹೋಮಕುಂಡದಲ್ಲಿ ಶವವನ್ನು ದಹಿಸಿ ಸಾಕ್ಷ್ಯಗಳನ್ನು ನಾಶ ಮಾಡಲಾಯಿತು
ಅವಶೇಷಗಳನ್ನು ಪ್ರಕರಣದ ಐದನೇ ಆರೋಪಿ ರಾಘವೇಂದ್ರನ ಸಹಾಯದಿಂದ ಕಾರಿನ ಡಿಕ್ಕಿಗೆ ವರ್ಗಾಯಿಸಿ ನದಿಗೆ ಎಸೆದು ಸಾಕ್ಷ್ಯ ನಾಶಪಡಿಸಲಾಯಿತು. ಭಾಸ್ಕರ್ ನಾಪತ್ತೆಯಾದ ಬಗ್ಗೆ ದೂರು ಬಂದಾಗ ಪೊಲೀಸರಿಗೆ ರಾಜೇಶ್ವರಿ ಮತ್ತು ಮಗ ನವನೀತ್ ತಪ್ಪು ಮಾಹಿತಿ ನೀಡಿದರು ಎಂಬುದನ್ನು ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ.
ದಾಖಲೆಗಳಿಂದ ತಿಳಿದು ಬರುವ ಪ್ರಕಾರ ಮೊದಲನೇ ಆರೋಪಿ ಮತ್ತು ಮೂರನೇ ಆರೋಪಿ ನಡುವೆ ಅಸಾಧಾರಣ ಸಂಬಂಧ ಇತ್ತು. ಭಾಸ್ಕರ್ ಶೆಟ್ಟಿ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜೇಶ್ವರಿ, ನವನೀತ್ ಹಾಗೂ ಭಾಸ್ಕರ್ ಶೆಟ್ಟಿ ನಡುವೆ ಗಂಭೀರ ಕಲಹ ಉಂಟಾಗುತ್ತಿತ್ತು.
2016ರ ಜುಲೈ 9ರಂದು ಉಡುಪಿಯ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ನಲ್ಲಿ ಭಾಸ್ಕರ್ ಶೆಟ್ಟಿ, ರಾಜೇಶ್ವರಿ ಹಾಗೂ ನವನೀತ್ ಜಗಳವಾಡಿಕೊಂಡಿದ್ದರು. ಆ ಬಳಿಕ ಹಲವು ಕಡೆ, ವಿವಿಧ ವ್ಯಕ್ತಿಗಳ ಎದುರು ಭಾಸ್ಕರ್ ಶೆಟ್ಟಿ ತಮ್ಮ ಆಸ್ತಿಯನ್ನು ಅನಾಥಾಶ್ರಮಕ್ಕೆ ಹಾಗೂ ತಮ್ಮ ತಾಯಿಗೆ ನೀಡಿ ದೇಶ ತೊರೆಯುವುದಾಗಿ ಹೇಳಿಕೊಂಡಿದ್ದರು. ಇದರಿಂದ ಕ್ರುದ್ಧರಾದ ಮೂವರೂ ಆರೋಪಿಗಳು ಐಪಿಸಿ ಸೆಕ್ಷನ್ 302, 201, ಮತ್ತು 120 ಬಿಗಳಡಿ ಬರುವ ಅಪರಾಧ ಎಸಗಿದ್ದು, ಸೆಕ್ಷನ್ 34ರ ಅನುಸರಣೆ ಇದನ್ನು ಗಮನಿಸಬೇಕಾಗುತ್ತದೆ.