ಉಡುಪಿ, ಜೂ. 09 (DaijiworldNews/SM): ಕೆಲವು ನಿಬಂಧನೆಗಳೊಂದಿಗೆ ಜನಜೀವನ ಪ್ರಾರಂಭಿಸಬೇಕು. ಧಾರ್ಮಿಕ ಮತ್ತು ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳು ನಡೆಸುವುದು ಬೇಡ. ಕನಿಷ್ಠ ಮೂರು ತಿಂಗಳು ಈ ಚಟುವಟಿಕೆ ಬಂದ್ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಜನಜೀವನಕ್ಕೆ ಅನುಕೂಲ ಮಾಡಿಕೊಡಬೇಕು. ಗೂಡಂಗಡಿ, ಹೋಟೆಲ್ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು ಎಂದು ಉಡುಪಿಯ ಶಾಸಕ ಕೆ ರಘುಪತಿ ಭಟ್ ತಿಳಿಸಿದ್ದಾರೆ. ಜೂನ್ 14 ನಂತರ ಲಾಕ್ ಡೌನ್ ಮುಂದುವರೆದರೆ ಆರ್ಥಿಕ ಸಂಕಷ್ಟವಾಗುತ್ತದೆ. ಆರ್ಥಿಕ ಪ್ಯಾಕೇಜು ಕೊಟ್ಟು ಪೂರೈಸುವುದಿಲ್ಲ. ಜೂನ್ 14ರ ನಂತರ ಲಾಕ್ ಡೌನ್ ವಾಪಸ್ ಪಡೆಯಲು ಸಿಎಂಗೆ ಮನವಿ ಮಾಡುತ್ತೇವೆ. ಪಾಸಿಟಿವಿಟಿ ರೇಟ್ ಶೇಕಡ 10ರಿಂದ 15 ಕಡಿಮೆಯಾದ ಜಿಲ್ಲೆಗೆ ಲಾಕ್ ಡೌನ್ ಬೇಡ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಪಾಸಿಟಿವ್ ಕೇಸ್ 50 ಸಾವಿರದಿಂದ 12 ಸಾವಿರಕ್ಕೆ ಇಳಿದಿದೆ. ಅನ್ ಲಾಕ್ ಮಾಡದಿದ್ದರೆ ಕೋವಿಡ್ ಗಿಂತ ಗಂಭೀರ ಪರಿಸ್ಥಿತಿ ಉಂಟಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.