ಮಂಗಳೂರು, ಜೂ 09 (DaijiworldNews/MS): ಸೌದಿ ಅರೇಬಿಯಾದಲ್ಲಿನಿಗೂಢ ರೀತಿಯಲ್ಲಿ ಮೃತಪಟ್ಟಿದ್ದ ತೊಕ್ಕೊಟ್ಟು ಸಮೀಪದ ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿ’ಸೋಜ(53)ರ ಪಾರ್ಥಿವ ಶರೀರ ಎರಡೂ ವರೆ ತಿಂಗಳ ಬಳಿಕ ತಾಯ್ನಾಡಿಗೆ ತಲುಪಿದೆ.
ಎರಡು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದು ಅಸೀರ್ ಪ್ರಾಂತ್ಯದ ಜಿಝಾನ್ನಲ್ಲಿ ಓಸೋಲ್ ಅಲ್ ಬನ್ನಾ ಎಂಬ ಕಂಪೆನಿಯಲ್ಲಿ ಇಲೆಕ್ಟ್ರೀಶಿಯನ್ ಆಗಿ ದುಡಿಯುತ್ತಿದ್ದರು.
ಮಾ.20ರಂದು ಸಂಜೆ ಪತ್ನಿ ಸರಿತಾ ಡಿಸೋಜ ಅವರಲ್ಲಿ ವೀಡಿಯೋ ಕಾಲ್ ಮಾಡಿ ಸಂಭಾಷಣೆ ನಡೆಸಿದ್ದು ಬಳಿಕ ಮನೆಮಂದಿಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕೆಲವೇ ಹೊತ್ತಿನಲ್ಲಿ ಅವರು ತಂಗಿದ್ದ ಕೋಣೆಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಅಲ್ ಬನ್ನಾ ಕಂಪನಿಯವರು ರೊನಾಲ್ಡ್ ಮೃತಪಟ್ಟಿರುವ ಬಗ್ಗೆ ಮನೆಯವರಿಗೆ ಸುದ್ದಿ ಮುಟ್ಟಿಸುವ ಪ್ರಯತ್ನ ಮಾಡಿದರೂ ಸಂಪರ್ಕಕ್ಕೆ ಸಿಗದ ಕಾರಣ ಅವರನ್ನು ಸೌದಿ ಅರೇಬಿಯಾಗೆ ಕಳುಹಿಸಿದ ಮುಂಬೈನ ಏಜೆಂಟರಿಗೆ ವಿಷಯ ಮುಟ್ಟಿಸಿ ಬಳಿಕ ತಮ್ಮ ಮಂಗಳೂರಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ಮಾಹಿತಿಹರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಸೋಷಿಯಲ್ ಫೋರಂ ಸದಸ್ಯರು ಜಿಝಾನ್ ದರ್ಬ್ ನಲ್ಲಿರುವ ಸಿದ್ದೀಕ್ ಉಳ್ಳಾಲ ಅವರ ಮೂಲಕ ಶವ ತಾಯ್ನಾಡಿಗೆ ತರಿಸುವ ಪ್ರಯತ್ನ ಆರಂಭಿಸಿದ್ದರು.
ಇದಕ್ಕಾಗಿ ಮೃತರ ಮನೆಯವರು ಸಂಘಟನೆಯ ಅಸೀರ್ ವಲಯ ಸಂಚಾಲಕ ಜಿ.ಕೆ.ಸಲೀಂ ಗುರುವಾಯನಕೆರೆ ಅವರನ್ನು ಸಂಪರ್ಕಿಸಿ ಮೃತರ ದಾಖಲೆಗಳನ್ನು ನೀಡಿದ್ದರು. ಅದರಂತೆ ಪಾಸ್ ಪೋರ್ಟ್ ಮತ್ತು ಐಡಿಯನ್ನೊಳಗೊಂಡ ದಾಖಲೆ ಗಳೊಂದಿಗೆ ಸಂಘಟನೆಯ ಜಿಝಾನ್ ಹಾಗೂ ಅಬು ಆರಿಸ್ ತಂಡ ಜಿಝಾನ್ ಪ್ರಾಂತ್ಯದ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ಮೃತದೇಹ ಅಬು ಅರೀಸ್ ನಲ್ಲಿರುವ ಕಿಂಗ್ ಫಹಾದ್ ಆಸ್ಪತ್ರೆಯಲ್ಲಿರುವುದು ಗೊತ್ತಾಗಿದೆ.
ಸಲೀಂ ಮತ್ತು ಸಿದ್ದೀಕ್ ಉಳ್ಳಾಲ ಅವರು ಅವರು ಅಲ್ ಬನ್ನಾನ್ ಸಂಸ್ಥೆಯ ಮುಖ್ಯಸ್ಥರ ಜೊತೆ ಅಸ್ಪತ್ರೆಗೆ ಭೇಟಿ ನೀಡಿ ಮೃತದೇಹ ತಾಯ್ನಾಡಿಗೆ ಕಳುಹಿಸಲು ಬೇಕಾದ ದಾಖಲೆಗಳ ವ್ಯವಸ್ಥೆ ಮಾಡಿದ್ದಾರೆ. ಸೌದಿ ಅರೇಬಿಯಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಸಂಘಟನೆಯ ಅಸೀರ್ ಸಮಿತಿಯ ಉಪಾಧ್ಯಕ್ಷ ಹನೀಫ್ ಮಂಜೇಶ್ವರ ಸಹಕರಿಸಿದ್ದಾರೆ. ಶಾಸಕ ಯು.ಟಿ.ಖಾದರ್ ಅವರೂ ಶ್ರಮಿಸಿದ್ದಾರೆ ಎಂದು ರೊನಾಲ್ಡ್ ಕುಟುಂಬಸ್ಥರು ತಿಳಿಸಿದ್ದಾರೆ.