ಉಡುಪಿ, ಜೂ 09 (DaijiworldNews/MS): ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ 3 ತಿಂಗಳ ಸಂಬಳ ನೀಡಬೇಕೆಂದು ಒತ್ತಾಯಿಸಿ ಜೂ. 9ರ ಬುಧವಾರ ಧಿಡೀರ್ ಮುಷ್ಕರ ನಡೆಸಿದರು.
ಸುಮಾರು 3 ತಿಂಗಳಿನಿಂದ ತಮಗೆ ಸಂಬಳ ನೀಡಲಾಗಿಲ್ಲ ನಾವು ತೊಂದರೆಗೊಳಗಾಗಿದ್ದೇವೆ ಎಂದು ವೈದ್ಯರು ಸೇರಿದಂತೆ 200 ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದು, ಇದರಿಂದ ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿಯರು, ಮಕ್ಕಳು ಇತರ ರೋಗಿಗಳು ತೊಂದರೆ ಅನುಭವಿಸಿದರು.
ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ಆಸ್ಪತ್ರೆಯ ಮುಂಭಾಗದಲ್ಲಿ ಒಟ್ಟುಗೂಡಿ ಮುಷ್ಕರ ನಡೆಸಿದರು, ಅಲ್ಲದೆ 2020 ರ ಅಕ್ಟೋಬರ್ನಿಂದ ತಮಗೆ ಪಿಎಫ್ ಸೌಲಭ್ಯ ನೀಡಿಲ್ಲ ಎಂದು ದೂರಿದರು.
ತಪಾಸಣೆ ಮತ್ತು ಚಿಕಿತ್ಸೆಗಾಗಿ ಬಂದ ರೋಗಿಗಳು ಸಿಬ್ಬಂದಿಗಳ ಅಘೋಷಿತ ಮುಷ್ಕರದಿಂದಾಗಿ ತೊಂದರೆಗಳನ್ನು ಎದುರಿಸಬೇಕಾಯಿತು.