ಮಂಗಳೂರು, ಜೂ 09 (DaijiworldNews/MS): ಪಾಸಿಟಿವಿಟಿ ದರ ತಗ್ಗಿಸಲು ಹಾಗೂ ಕೊರೊನಾವೈರಸ್ ಸೋಂಕು ಹೆಚ್ಚಿನ ಹರಡುವಿಕೆಯ ಬಗ್ಗೆ ಆತಂಕವಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಾಕ್ ಡೌನ್ ನಿಯಮಗಳನ್ನು ಕಠಿಣಗೊಳಿಸುವುದಾಗಿ ಘೋಷಿಸಿದ್ದರು.
ಈ ಸೂಚನೆಗಳಿಗೆ ಅನುಗುಣವಾಗಿ ಪೊಲೀಸರು ಮತ್ತು ನಗರ ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಜೂನ್ 9 ರ ಬುಧವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಕೊವೀಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿರುವುದು ಕಂಡುಬಂದ ಮಾರಾಟಗಾರರು ಮತ್ತು ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು. ಅಧಿಕಾರಿಗಳು ಲೇಡಿಹಿಲ್ ನಿಂದ ಉರ್ವಸ್ಟೋರ್ ಕೂಳೂರು ವರೆಗೆ ಕಾರ್ಯಾಚರಣೆ ನಡೆಸಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಯಿತು.
ಲಾಕ್ ಡೌನ್ ಉಲ್ಲಂಘಿದ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟು ನಡೆಸಿದವರ ಉದ್ದಿಮೆ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.
ಅಗತ್ಯ ವಸ್ತುಗಳನ್ನು ಖರೀದಿಸುವ ಸಮಯದ ಬಳಿಕ ಪೊಲೀಸರು ತಮ್ಮ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಿದರು. ಪ್ರಮುಖ ರಸ್ತೆಗಳು ಮತ್ತು ಆಂತರಿಕ ರಸ್ತೆಗಳ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಬಿಗಿಗೊಳಿಸಿದರು. ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಉಪ ಪೊಲೀಸ್ ಆಯುಕ್ತ ಹರಿರಾಮ್ ಶಂಕರ್, ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ನಟರಾಜ್ ಮತ್ತು ಇತರ ಹಿರಿಯ ಅಧಿಕಾರಿಗಳು ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ ನಗರ ಪಾಲಿಕೆ ಅಧಿಕಾರಿಗಳು ಕರೋನವೈರಸ್ ಮಾರ್ಗಸೂಚಿಗಳು ಮತ್ತು ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡರು.